ಶಿವಮೊಗ್ಗ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿಯನ್ನು ಕೊಲೆ ಮಾಡಿದ ಪತ್ನಿ ಮತ್ತು ಪ್ರಿಯಕರನಿಗೆ ಭದ್ರಾವತಿಯ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶಿಸಿದೆ.
ಬಿ.ಎಸ್. ಪ್ರಕಾಶ್ ಬಾಬು(38) ಕೊಲೆಯಾದ ವ್ಯಕ್ತಿ. ಭದ್ರಾವತಿಯ ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ನರ್ಸ್ ಆಗಿದ್ದ ಫ್ಲೋರಾ ನ್ಯಾನ್ಸಿ(36) ಆಕೆಯ ಪ್ರಿಯಕರ ರಾಜಶೇಖರಯ್ಯ(31) ಶಿಕ್ಷೆಗೊಳಗಾದವರು.
ಟ್ಯಾಕ್ಸಿ ಚಾಲಕನಾಗಿದ್ದ ಪ್ರಕಾಶ್ ಬಾಬು ಜೊತೆಗೆ ಹತ್ತಿರದ ಸಂಬಂಧಿ ಫ್ಲೋರಾ ನ್ಯಾನ್ಸಿಯ ಮದುವೆ 2014ರಲ್ಲಿ ನಡೆದಿತ್ತು. ದಂಪತಿಗೆ ಮಕ್ಕಳಿರಲಿಲ್ಲ. ಕೆಲ ವರ್ಷದ ನಂತರ ರಾಜಶೇಖರಯ್ಯ ಜೊತೆಗೆ ಫ್ಲೋರಾ ನ್ಯಾನ್ಸಿಗೆ ಅಕ್ರಮ ಸಂಬಂಧ ಬೆಳೆದಿದ್ದು, ಈ ವಿಷಯ ತಿಳಿದ ಪತಿ ಪ್ರಕಾಶ್ ಬಾಬು ಆಕ್ಷೇಪ ವ್ಯಕ್ತಪಡಿಸಿದ್ದರು.
ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ ಪತ್ನಿ 2020ರ ಜನವರಿ 15ರಂದು ರಾತ್ರಿ ಸುರಗಿತೋಪಿನಲ್ಲಿರುವ ಮನೆಯಲ್ಲಿ ಪತಿಗೆ ತಂಪು ಪಾನೀಯದಲ್ಲಿ ಮತ್ತು ಭರಿಸುವ ಮಾತ್ರೆ ಬೆರೆಸಿ ಕೊಟ್ಟಿದ್ದಳು. ಪತಿ ನಿದ್ದೆಗೆ ಜಾರಿದ ನಂತರ ಪ್ರಿಯಕರ ರಾಜಶೇಖರಯ್ಯನನ್ನು ಮನೆಗೆ ಕರೆಸಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದರು.
ನಂತರ ಕಾರ್ ನಲ್ಲಿ ಮೃತದೇಹ ತೆಗೆದುಕೊಂಡು ಹೋಗಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪ ಭದ್ರಾ ನಾಲೆಗೆ ಎಸೆದಿದ್ದರು. ಮೂರು ದಿನಗಳ ನಂತರ ಶವ ದೊರೆತು ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾವಿಸಲಾಗಿತ್ತು. ಮೃತನ ಸಹೋದರ ಫ್ರಾನ್ಸಿಸ್ ನೀಡಿದ ದೂರು ಆಧರಿಸಿ ಕಾಗದನಗರ ಠಾಣೆ ಪೋಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಕೊಲೆ ಮಾಡಿರುವ ಅಪರಾಧ ಸಾಬೀತಾಗಿದ್ದು, ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್ ಅವರು ಇಬ್ಬರಿಗೂ ಗಲ್ಲು ಶಿಕ್ಷೆ ಮತ್ತು 14 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಮೃತನ ಸಹೋದರ ಫ್ರಾನ್ಸಿಸ್ ಗೆ 5 ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ. ವಕೀಲರಾದ ರತ್ನಮ್ಮ ಅವರು ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದರು.