ಬೆಂಗಳೂರು: ರಾಜ್ಯದಲ್ಲಿ ಆದಾಯ ಪ್ರಮಾಣಪತ್ರಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ಮತ್ತು ಸರ್ಕಾರಿ ಸೇವೆಗಳಲ್ಲಿ ಪಾರದರ್ಶಕತೆ ತರಲು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭರ್ಜರಿ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದಾರೆ. ಇನ್ನು ಮುಂದೆ ಹೊಸ ವಾಹನ ಖರೀದಿಸುವಾಗ ಆಧಾರ್ ಇ-ಕೆವೈಸಿ (e-KYC) ಕಡ್ಡಾಯಗೊಳಿಸುವ ಮೂಲಕ ಪ್ರತಿಯೊಂದು ಕುಟುಂಬದ ನಿಖರ ಆರ್ಥಿಕ ಸ್ಥಿತಿಗತಿಯನ್ನು ಪತ್ತೆಹಚ್ಚಲು ಸರ್ಕಾರ ಮುಂದಾಗಿದೆ.ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸಕಾಲ ಸೇವೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಮಹತ್ವದ ನಿರ್ಧಾರದ ಸುಳಿವು ನೀಡಿದ್ದಾರೆ.
ಏನಿದು ಹೊಸ ವ್ಯವಸ್ಥೆ?
ಸರ್ಕಾರವು ರಾಜ್ಯದ ಪ್ರತಿ ಕುಟುಂಬದ ಸಮಗ್ರ ಆರ್ಥಿಕ ಡೇಟಾಬೇಸ್ (Economic Database) ಸಿದ್ಧಪಡಿಸುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಹೈಲೈಟ್ಸ್ ಇಲ್ಲಿದೆ:
ಆಧಾರ್ ಲಿಂಕ್: ಚಾಲನಾ ಪರವಾನಗಿ (DL) ಪಡೆಯುವಾಗ ಆಧಾರ್ ಕಡ್ಡಾಯವಿರುವಂತೆ, ವಾಹನ ನೋಂದಣಿಗೂ ಆಧಾರ್ ಇ-ಕೆವೈಸಿ ಕಡ್ಡಾಯವಾಗಲಿದೆ. ಇದರಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬದ ಹೆಸರಿನಲ್ಲಿ ಎಷ್ಟು ವಾಹನಗಳಿವೆ ಎಂಬುದು ಸರ್ಕಾರದ ಬೆರಳ ತುದಿಯಲ್ಲಿ ಲಭ್ಯವಿರುತ್ತದೆ.
ಕುಟುಂಬ (Kutumba) ಸಾಫ್ಟ್ವೇರ್ ಬಳಕೆ: ರಾಜ್ಯದ 1.6 ಕೋಟಿ ಕುಟುಂಬಗಳ ಡೇಟಾ ಹೊಂದಿರುವ ಕುಟುಂಬ ಸಾಫ್ಟ್ವೇರ್ ಜೊತೆಗೆ ತೆರಿಗೆ ಪಾವತಿ, ಆಸ್ತಿ ವಿವರ (ಇ-ಸ್ವತ್ತು, ಇ-ಆಸ್ತಿ) ಮತ್ತು ವಾಹನ ಮಾಲೀಕತ್ವದ ವಿವರಗಳನ್ನು ವಿಲೀನಗೊಳಿಸಲಾಗುತ್ತದೆ.
ತ್ವರಿತ ಪ್ರಮಾಣಪತ್ರ: ಸದ್ಯಕ್ಕೆ ಆದಾಯ ಪ್ರಮಾಣಪತ್ರ ಪಡೆಯಲು 14-21 ದಿನ ಬೇಕು. ಆದರೆ ಈ ಹೊಸ ಸ್ಮಾರ್ಟ್ ಸಿಸ್ಟಮ್ ಜಾರಿಗೆ ಬಂದರೆ ಕೇವಲ 3 ರಿಂದ 4 ದಿನಗಳಲ್ಲಿ ಆಟೋಮ್ಯಾಟಿಕ್ ಆಗಿ ಪ್ರಮಾಣಪತ್ರ ನಿಮ್ಮ ಕೈ ಸೇರಲಿದೆ
ಅಕ್ರಮಗಳಿಗೆ ಶಾಕ್
ವಾರ್ಷಿಕ 8 ಲಕ್ಷ ರೂ.ಗಿಂತ ಹೆಚ್ಚು ಆದಾಯವಿದ್ದರೂ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಅಥವಾ ಶಿಕ್ಷಣದಲ್ಲಿ ರಿಯಾಯಿತಿ ಪಡೆಯುವವರಿಗೆ ಈ ವ್ಯವಸ್ಥೆ ಬಿಸಿ ಮುಟ್ಟಿಸಲಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳೂ ಕಡಿಮೆ ಆದಾಯದ ಸರ್ಟಿಫಿಕೇಟ್ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಅಕ್ರಮಗಳನ್ನು ತಡೆಯುವುದೇ ನಮ್ಮ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಹಜರು ಪ್ರಕ್ರಿಯೆ ರದ್ದು?
ಈ ಆರ್ಥಿಕ ಪ್ರೊಫೈಲ್ ಸಂಪೂರ್ಣವಾಗಿ ಸಿದ್ಧವಾದರೆ, ಆದಾಯ ಪ್ರಮಾಣಪತ್ರ ನೀಡುವ ಮೊದಲು ಗ್ರಾಮ ಆಡಳಿತಾಧಿಕಾರಿಗಳು (VAO) ಮನೆಗೆ ಬಂದು ತನಿಖೆ ನಡೆಸುವ (ಮಹಜರು) ಹಳೇ ಪದ್ಧತಿಯನ್ನು ರದ್ದುಗೊಳಿಸಲು ಸರ್ಕಾರ ಚಿಂತಿಸುತ್ತಿದೆ.