2018ರ ಸಮೀಕ್ಷೆಯಲ್ಲಿ ಕೈಬಿಟ್ಟುಹೋಗಿರುವ ಅರ್ಹ ವಸತಿ ಮತ್ತು ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಇದೀಗ ಅಂತಿಮ ಅವಕಾಶ ನೀಡಲಾಗಿದ್ದು, ಮೇ 15ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಕಾರ್ಯಾಲಯ ತಿಳಿಸಿದೆ.
ರಾಜೀವ್ ಗಾಂಧಿ ವಸತಿ ನಿಗಮದ ನಿರ್ದೇಶನದಂತೆ, 2018ರಲ್ಲಿ ನಡೆಸಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಸಮೀಕ್ಷಾ ಪಟ್ಟಿಯನ್ನು ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿದೆ. ಆ ಸಂದರ್ಭದಲ್ಲಿ ಅರ್ಹತೆ ಇದ್ದರೂ ತಾಂತ್ರಿಕ ಕಾರಣಗಳಿಂದ ಅಥವಾ ಇತರೇ ಅಡೆತಡೆಗಳಿಂದ ಪಟ್ಟಿಯಿಂದ ಹೊರಗುಳಿದವರನ್ನು ಪತ್ತೆಹಚ್ಚಿ, ಗ್ರಾಮ ಸಭೆಗಳ ಮೂಲಕ ಅವರ ಅರ್ಹತೆಯನ್ನು ಮರುಪರಿಶೀಲಿಸಿ ಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ. 2026-27ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಒಂದು ಲಕ್ಷ ಮನೆಗಳ ಹಂಚಿಕೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಫಲಾನುಭವಿಗಳನ್ನು ಆನ್ಲೈನ್ ಲಾಟರಿ ಮೂಲಕ ಗ್ರಾಮ ಸಭೆಗಳಲ್ಲಿ ಪಾರದರ್ಶಕವಾಗಿ ಆಯ್ಕೆ ಮಾಡಲಾಗುವುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವೆಬ್ಸೈಟ್ನಲ್ಲಿ ದತ್ತಾಂಶ ಅಳವಡಿಸಲು 2026ರ ಮೇ 15 ಅಂತಿಮ ದಿನಾಂಕವಾಗಿದೆ.
ಒಂದು ವೇಳೆ ಅರ್ಹ ವಸತಿ ರಹಿತರ ಹೆಸರುಗಳು ಇನ್ನೂ ಪಟ್ಟಿಗೆ ಸೇರ್ಪಡೆಯಾಗದಿದ್ದಲ್ಲಿ, ಸಂಬಂಧಪಟ್ಟ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೂಡಲೇ ಕ್ರಮ ವಹಿಸಬೇಕು. ನಿಗದಿಪಡಿಸಿದ ಕಾಲಾವಕಾಶದ ನಂತರ ಯಾವುದೇ ಹೊಸ ಸೇರ್ಪಡೆಗೆ ಅವಕಾಶವಿರುವುದಿಲ್ಲ ಮತ್ತು ಅಂದಿನ ಪಟ್ಟಿಯನ್ನೇ ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಚಿತ್ರದುರ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.