ಮಂಗಳೂರು: ರಸ್ತೆ ಕಾಮಗಾರಿ ವೇಳೆಯಲ್ಲಿ ರೋಡ್ ರೋಲರ್ ಹರಿದು ಕಾರ್ಮಿಕ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ರಾಮಚಂದ್ರ ಶಿಕಾರ್(55) ಮೃತಪಟ್ಟವರು. ಬಿಸಿಲ ಬೇಗೆಯಿಂದ ದಣಿದು ಮಲಗಿದ್ದ ಅವರ ಮೇಲೆ ರೋಡ್ ರೋಲರ್ ಹರಿದು ದುರಂತ ನಡೆದಿದೆ. ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ತರಲಾಗಿದ್ದ ರೋಡ್ ರೋಲರ್ ನಿಲ್ಲಿಸಲಾಗಿತ್ತು. ಅದರ ನೆರಳಿನಲ್ಲಿ ರಾಮಚಂದ್ರ ಶಿಕಾರಿ ಮಲಗಿದ್ದರು. ಚಾಲಕ ಅವರನ್ನು ಗಮನಿಸದೇ ರೋಡ್ ರೋಲರ್ ಚಾಲನೆ ಮಾಡಿದ್ದು, ರಾಮಚಂದ್ರ ಅವರ ಮೇಲೆ ರೋಲರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಸರ್ವಿಸ್ ರಸ್ತೆ ಕೆಲಸ ನಡೆಯುತ್ತಿದ್ದು, ಕಾರ್ಮಿಕ ರಾಮಚಂದ್ರ ಶಿಕಾರಿ ರೋಲರ್ ಹಿಂಭಾಗದಲ್ಲಿ ಮಲಗಿದ್ದರು. ಆತ ಮಲಗಿರುವುದು ಚಾಲಕನ ಅರಿವಿಗೆ ಬಾರದೆ ರೋಡ್ ರೋಲರ್ ಚಲಾಯಿಸಿದ್ದರಿಂದ ಅವಘಡ ಸಂಭವಿಸಿದೆ. ಅಪಘಾತದಿಂದ ರಾಮಚಂದ್ರ ಶಿಕಾರಿ ಮೃತದೇಹ ಅಪ್ಪಚ್ಚಿಯಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.