ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿ ದರ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ತರಕಾರಿ ಬೆಲೆ ಗ್ರಾಹಕರಿಗೆ ಸಂಕಷ್ಟ ತಂದಿದೆ.
ಕಳೆದ 15 ದಿನದ ಅವಧಿಯಲ್ಲಿ ತರಕಾರಿ ದರ ಎರಡು ಪಟ್ಟು ಹೆಚ್ಚಳವಾಗಿದೆ. ಭಾರೀ ಬಿಸಿಲಿನ ತಾಪಕ್ಕೆ ತರಕಾರಿಗಳ ಹೂವುಗಳು ಉದುರುತ್ತಿದ್ದು, ಕೆಲವೆಡೆ ಭಾರಿ ಮಳೆಯಿಂದ ಇಳುವರಿ ಕುಂಠಿತವಾಗಿದೆ. ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿದೆ.
ಊರ ಹಬ್ಬ, ಜಾತ್ರೆ, ರಥೋತ್ಸವ, ಮದುವೆಗಳು ನಡೆಯುತ್ತಿರುವುದರಿಂದ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿರುವುದರಿಂದ ದರ ಹೆಚ್ಚಳವಾಗಿದೆ. ಹತ್ತು ದಿನದ ಹಿಂದೆ ಒಂದು ಕೆಜಿಗೆ 80 ರೂಪಾಯಿ ಇದ್ದ ಬೀನ್ಸ್ ಈಗ 200 ರುಪಾಯಿಗೆ ತಲುಪಿದೆ. 30 ರೂಪಾಯಿ ಇದ್ದ ಕ್ಯಾರಟ್ ದರ 60 ರೂಪಾಯಿ ಆಗಿದೆ. 120 ರೂಪಾಯಿ ಇದ್ದ ಬಟಾಣಿ ದರ 360 ರೂ. ಆಗಿದೆ. ಅದೇ ರೀತಿ ಟೊಮೆಟೊ ದರ ಕೆಜಿಗೆ 60 ರೂ.ಗೆ ಏರಿಕೆಯಾಗಿದ್ದು, ಹಸಿಮೆಣಸಿನ ಕಾಯಿ ದರ 95 ರೂ.ಗೆ ತಲುಪಿದೆ. ಇದೇ ರೀತಿ ಹಣೆಯ ಹಲವು ತರಕಾರಿ ದುಬಾರಿಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.