ಬೆಳಗಾವಿ: ರೈತರು ಮತ್ತು ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಅಂತಹ ಪ್ರಸಂಗ ಬಂದರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಎಚ್ಚರಿಕೆ ನೀಡಿದ್ದಾರೆ..
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ್ ಸವದಿ ಅವರು ನೀಡಿದ ಈ ಹೇಳಿಕೆ ಭಾರಿ ವೈರಲ್ ಆಗಿದೆ.
ತಮ್ಮ ವಿರುದ್ಧ ನಡೆಯುತ್ತಿರುವ ವೈಯಕ್ತಿಕ ಟೀಕೆಗಳಿಗೆ ತಿರುಗೇಟು ನೀಡಿದ ಸವದಿ, ಲಕ್ಷ್ಮಣ್ ಸವದಿಯನ್ನು ಟ್ರ್ಯಾಕ್ಟರ್ ಹೊಡೆಯಲು ಕಳಿಸುತ್ತೇವೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಹೌದು, ನಾನೊಬ್ಬ ರೈತನ ಹೊಟ್ಟೆಯಲ್ಲಿ ಹುಟ್ಟಿದ್ದೇನೆ. ಎತ್ತು ಹೊಡೆಯುತ್ತೇನೆ, ಟ್ರ್ಯಾಕ್ಟರ್ ಕೂಡ ಹೊಡೆಯುತ್ತೇನೆ. ಆದರೆ, ಪ್ರಸಂಗ ಬಂದರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದಲೂ ಹೊಡೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಐಎಎಸ್, ಐಪಿಎಸ್ ಓದಿಲ್ಲ. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿ, ಕಬಡ್ಡಿ ಆಡಿಕೊಂಡು, ದನ ಕಾಯ್ದುಕೊಂಡು ಬೆಳೆದವ. ನನ್ನ ಕ್ಷೇತ್ರದ 1,31,000 ಜನರೇ ನನಗೆ ರಕ್ಷಾಕವಚವಾಗಿ ನಿಂತಿದ್ದಾರೆ. ರೈತರ ಕುಲದಲ್ಲಿ ಹುಟ್ಟಿದ ನನಗೆ ಅವರ ಸ್ವಾಭಿಮಾನ ಮತ್ತು ಬೆಳೆದ ಬೆಳೆಗೆ ಮೋಸವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲೇ ಅತಿ ಹೆಚ್ಚು, ಅಂದರೆ ವಾರ್ಷಿಕ 76 ಲಕ್ಷ ಟನ್ ಕಬ್ಬು ಬೆಳೆಯುವ ಹೆಮ್ಮೆಯ ತಾಲೂಕು ನಮ್ಮದು. ಅಮ್ಮಾಜೇಶ್ವರಿ-ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡ ಬಳಿಕ ಮುಂದಿನ ಕೇವಲ ಎರಡು ವರ್ಷಗಳಲ್ಲಿ ಇದು 1 ಕೋಟಿ ಟನ್ ಕಬ್ಬು ಬೆಳೆಯುವ ನಾಡಾಗಿ ಹೊರಹೊಮ್ಮಲಿದೆ ಎಂದರು.
ರೈತರು ಬೆವರು ಹರಿಸಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ತಂದಾಗ ನಡೆಯುತ್ತಿರುವ ಮೋಸದ ಬಗ್ಗೆ ಗೊತ್ತಾಗಿದೆ.ಒಂದು ಟ್ರಿಪ್ಗೆ ಎರಡು-ಮೂರು ಟನ್ ತೂಕದ ಕಬ್ಬು ಕದ್ದು ರೈತರ ರಕ್ತ ಹೀರುವವರಿಗೆ ಒಂದು ಎಕರೆ ಕಬ್ಬು ಬೆಳೆಯಲು ರೈತರು ಪಡುವ ಕಷ್ಟವೇನು ಎಂಬುದು ತಿಳಿದಿಲ್ಲ. ಇಂತಹ ಮೋಸದಾಟಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಕಾರ್ಖಾನೆಗಳು ಹಾಗೂ ದಲ್ಲಾಳಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.