ಶಿವಮೊಗ್ಗ: ರಾಜ್ಯದಲ್ಲಿ ಮತ್ತೊಮ್ಮೆ ಹಿಜಾಬ್ ವಿವಾದ ಮುನ್ನೆಲೆ ಬಂದಿದೆ. ಶಾಲಾ ಸಮವಸ್ತ್ರ ವಿಚಾರವಾಗಿ ಹೊಸ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿದೆ. ಇದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರದ ಆದೇಶ ಹಿಂಪಡೆದಿದೆ ಅನ್ನೋದಕ್ಕಿಂತಲೂ ಹೈಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್ನ್ನು ಶಾಲಾ – ಕಾಲೇಜುಗಳಲ್ಲಿ ಹಾಕುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈಗ ಅದನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಸಿಎಂ, ಗೃಹ ಮಂತ್ರಿಗಳು ಏನ್ ಮಾಡ್ತಾ ಇದ್ದಾರೆ. ಸರ್ವ ಜನಾಂಗದ ಶಾಂತಿಯ ಕರ್ನಾಟಕದಲ್ಲಿ ಅಶಾಂತಿ ಉಂಟು ಮಾಡಲು ಈ ಆದೇಶ ಮಾಡಿದ್ದಾರೆ. ಉಪ ಚುನಾವಣೆಯಿಂದ ಮುಸ್ಲೀಮರು ಕಾಂಗ್ರೆಸ್ ಪಕ್ಷಕ್ಕೆ ವಿರೋಧವಾಗಿದ್ದಾರೆ ಎಂದು ಆರೋಪಿಸಿದರು.
ಹಿಜಾಬನ್ನು ಶಾಲಾ – ಕಾಲೇಜುಗಳಲ್ಲಿ ಹಾಕಿಕೊಳ್ಳುಬಾರದೆಂಬ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಈಗ ಹಳೇ ಆದೇಶವನ್ನು ಕಿತ್ತು ಹಾಕಿದ್ದಾರೆ. ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಹಿಂದೂಗಳಿಗೆ ಅಪಮಾನ ಉಂಟು ಮಾಡಿದ ಹಾಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊನೆಯಾಗಲಿದೆ ಎಂದರು.
ಮುಸ್ಲಿಂ ಹೆಣ್ಣ್ಮಕ್ಕಳು ಹಿಜಾಬ್ ಧರಿಸಿ ಬಂದರೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳು ಕೇಸರಿಮಯವಾಗುತ್ತವೆ. ಮುಂದೆ ಯಾವಾಗಲಾದರೂ ಚುನಾವಣೆ ಬಂದರೂ ಸಹ ಶಾಲಾ-ಕಾಲೇಜು ಅಷ್ಟೇ ಅಲ್ಲ ವಿಧಾನಸೌಧವು ಸಹ ಕೇಸರಿಮಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಹಿಜಾಬ್ ಕುರಿತಾದ ಆದೇಶ ಹಿಂಪಡೆಯಬೇಕು, ಹೈಕೋರ್ಟ್ ಆದೇಶವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.