ಬೆಂಗಳೂರು: ಪರಿಚಿತರ ಅಪ್ರಾಪ್ತ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿ ನಂತರ ಕೃತ್ಯದ ವಿಡಿಯೋ ಚಿತ್ರೀಕರಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಸೈಬರ್ ಕ್ರೈಂ ಪೋಲೀಸರು ಬಂಧಿಸಿದ್ದಾರೆ.
ಕಗ್ಗಲಿಪುರದ ಕೈದಳ್ಳಿ ಪಾಳ್ಯದ ಕಿರಣ್ ಕುಮಾರ್, ಚನ್ನಪಟ್ಟಣ ತಾಲೂಕು ಸೀಬನಹಳ್ಳಿ ಎಂ.ಕೆ. ಆದಿತ್ಯ ಬಂಧಿತ ಆರೋಪಿಗಳಾಗಿದ್ದು ಅವರ ಮೊಬೈಲ್ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ NCRP ಪೋರ್ಟಲ್ ನ ಟಿಫ್ ಲೈನ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೃಶ್ಯಾವಳಿ ಬಗ್ಗೆ ಸಿಐಡಿಗೆ ಮಾಹಿತಿ ಬಂದಿತ್ತು. ಈ ಸುಳಿವು ಆಧರಿಸಿ ಪೊಲೀಸ್ ಇನ್ಸ್ಪೆಕ್ಟರ್ ವಸಂತ್ ಕುಮಾರ್ ತಂಡ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ.
ಚಿತ್ರದುರ್ಗ ಜಿಲ್ಲೆ ಯಮನಗಟ್ಟಿ ಗ್ರಾಮದ ಕಿರಣ್ ಕುಮಾರ್ ಕುರಿಗಾಹಿಯಾಗಿದ್ದು ತನ್ನ ಕುರಿಗಳನ್ನು ಮೇಯಿಸಲು ಕಗ್ಗಲಿಪುರಕ್ಕೆ ಬಂದಿದ್ದ. ಕನಕಪುರ ರಸ್ತೆಯ ರೆಸಾರ್ಟ್ ನಲ್ಲಿ ಆದಿತ್ಯ ಈಜುಕೊಳ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ. ಆರೋಪಿಗಳು ಸಹೋದರ ಸಂಬಂಧಿಗಳಾಗಿದ್ದರೆ.
ಕುರಿ ಮೇಯಿಸುವಾಗ ಸಂತ್ರಸ್ತೆಯರ ಕುಟುಂಬದವರ ಸ್ನೇಹವಾಗಿದೆ. ಪರಿಚಯದ ನೆಪದಲ್ಲಿ 13 ಮತ್ತು 15 ವರ್ಷದ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕವಾಗಿ ಶೋಷಣೆ ಮಾಡಿದ್ದರು. ತಾವು ಅಪ್ರಾಪ್ತ ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಕೃತ್ಯಗಳನ್ನು ಮೊಬೈಲ್ ನಲ್ಲಿ ಕಿರಣ್ ಮತ್ತು ಆದಿತ್ಯ ವಿಡಿಯೋ ಮಾಡಿಕೊಂಡಿದ್ದರು. ಮೊಬೈಲ್ ಫೋಲ್ಡರ್ ನಲ್ಲಿದ್ದ ಆ ವಿಡಿಯೋಗಳು ಗೂಗಲ್ ಅಪ್ಲೋಡ್ ಆಗಿವೆ. ತಕ್ಷಣವೇ ಆನ್ಲೈನ್ ನಲ್ಲಿ ವಿಡಿಯೋಗಳು ಹರಿದಾಡಿವೆ. ಎನ್.ಸಿ.ಆರ್.ಪಿ. ಪೋರ್ಟಲ್ ನಲ್ಲಿ ವರದಿಯಾಗಿದ್ದು ವಿಡಿಯೋ ಪರಿಶೀಲಿಸಿದಾಗ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿರುವುದು ಗೊತ್ತಾಗಿದೆ. ಸಂತ್ರಸ್ತೆಯರ ಕುಟುಂಬದವರನ್ನು ಸಂಪರ್ಕಿಸಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದು, ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.