ಬೆಂಗಳೂರು: ಮೇ 17ರಂದು ಭಾನುವಾರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಾಹಿತಿ ನೀಡಿದೆ.
ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಮೇ 17ರಂದು ಭಾನುವಾರ ನೇರಳೆ ಮಾರ್ಗದ ಕೆಲವು ನಿಲ್ದಾಣಗಳ ನಡುವೆ ಬೆಳಗ್ಗೆ 2 ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ (ಸೆಂಟ್ರಲ್ ಕಾಲೇಜ್) ನಡುವೆ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 07 ಗಂಟೆಯಿಂದ 09 ಗಂಟೆಯವರೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ.
ಇನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 07 ಗಂಟೆಯಿಂದ 09 ಗಂಟೆ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
ಚಲ್ಲಘಟ್ಟ – ವಿಜಯನಗರ, ಎಂ.ಜಿ. ರಸ್ತೆ – ವೈಟ್ ಫೀಲ್ಡ್, ಕಾಡುಗೋಡಿ, ಮಾದಾವರ – ಸಿಲ್ಕ್ ಇನ್ಸ್ಟಿಟ್ಯೂಟ್, ಆರ್.ವಿ. ರಸ್ತೆ – ಬೊಮ್ಮಸಂದ್ರ ಈ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಲಭ್ಯವಿರಲಿದೆ.
ಭಾನುವಾರ ಬೆಳಗ್ಗೆ 09 ಗಂಟೆಯ ಬಳಿಕ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಗೊಳ್ಳಲಿವೆ ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.