ಬೆಂಗಳೂರು: ಸ್ನೇಹಿತನ ಜನ್ಮದಿನ ಆಚರಿಸಲು ರೆಸಾರ್ಟ್ ಗೆ ಬಂದಿದ್ದ ಯುವಕನೊಬ್ಬ ನಿದ್ದೆ ಮಂಪರಿನಲ್ಲಿ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರದ ಹೊಸಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚರಮಂಗನಹಳ್ಳಿಯ ಅಭಿಲಾಶ್(20) ಮೃತಪಟ್ಟ ಯುವಕ. ಮೇ 17ರಂದು ಸ್ನೇಹಿತರ ತಂಡ ಜನ್ಮದಿನ ಆಚರಿಸಲು ಕೋಲಾರದಿಂದ ಹೊಸಹಳ್ಳಿ ರಸ್ತೆಯಲ್ಲಿರುವ ರೆಸಾರ್ಟ್ ಗೆ ಬಂದಿದೆ. ಮೇ 18ರ ಮಧ್ಯರಾತ್ರಿ ಸ್ನೇಹಿತರೆಲ್ಲ ಸೇರಿ ಜನ್ಮದಿನ ಆಚರಿಸಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ನಂತರ ಎಲ್ಲರೂ ರೂಂಗೆ ಹೋಗಿ ಮಲಗಿದ್ದಾರೆ. ಈ ವೇಳೆ ಹೊರಬಂದ ಅಭಿಲಾಶ್ ಹೆಚ್ಚಿನ ಸಮಯವಾದರೂ ಮರಳಿ ಬಾರದ ಕಾರಣ ಸ್ನೇಹಿತರು ಹುಡುಕಾಡಿದ್ದಾರೆ. ಆದರೆ, ಕತ್ತಲೆಯಲ್ಲಿ ಆತ ಕಂಡು ಬಂದಿರಲಿಲ್ಲ. ನಂತರ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.
ಬೆಳಗ್ಗೆ ಈಜುಕೊಳದಲ್ಲಿ ಯುವಕನ ಶವ ತೇಲುವುದನ್ನು ಗಮನಿಸಿದ ರೆಸಾರ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊಸಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿದ್ದೆ ಮಂಪರಿನಲ್ಲಿ ತೆರಳಿದ್ದ ಅಭಿಲಾಶ್ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.