ಸಾಮಾಜಿಕ ಜಾಲತಾಣದಲ್ಲಿ ವಾರಕ್ಕೊಂದು ಹೊಸ ಟ್ರೆಂಡ್ ಹುಟ್ಟಿಕೊಳ್ಳುತ್ತಿರುತ್ತದೆ. ಪೆಂಗ್ವಿನ್ ಟ್ರೆಂಡ್, ಪಂಚ್ ಕೋತಿಯ ಟ್ರೆಂಡ್, ಕೆಲ ಕಾಲ ತನ್ನ ಭಾಷಣದ ಮೂಲಕ ಹೀರೊ ಆಗಿ ಬಿಜೆಪಿ ಸೇರಿದ ಬಳಿಕ ಝೀರೊ ಆದ ರಾಘವ್ ಚಡ್ಡಾ ಟ್ರೆಂಡ್ಗಳನ್ನೂ ಸಹ ಕಂಡಿದ್ದೇವೆ.
ಅದೇ ರೀತಿ ಸದ್ಯ ಭಾರತದ ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಂಬ ಟ್ರೆಂಡ್ ಜೋರಾಗಿದೆ. ಹೆಸರು ಕೇಳಿದ ಕೂಡಲೇ ಮತ್ಯಾವುದಾದರೂ ನಟ ಅಥವಾ ಖ್ಯಾತಿ ಪಡೆದ ವ್ಯಕ್ತಿ ಹೊಸ ಪಕ್ಷ ಕಟ್ಟಿಬಿಟ್ರಾ ಎಂದು ಪ್ರಶ್ನೆ ಹಾಕಿಕೊಳ್ಳಬೇಡಿ. ಏಕೆಂದರೆ ಕಾಕ್ರೋಚ್ ಜನತಾ ಪಾರ್ಟಿ ನಿಜವಾಗಿ ರಾಜಕೀಯ ಪಕ್ಷವಲ್ಲ. ಬದಲಾಗಿ ಭಾರತದ ಯುವ ಜನತೆಗೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಯೊಬ್ಬರು ತಮ್ಮ ಚುಚ್ಚು ಮಾತುಗಳಿಂದ ನಿಂದಿಸಿದ ತರುವಾಯ ಹುಟ್ಟುಕೊಂಡ ವಿಡಂಬನಾತ್ಮಕ ಪಕ್ಷ.
ಪಕ್ಷದ ಉಗಮಕ್ಕೆ ಕಾರಣವೇನು?
ಮೇ 16ರಂದು ಹಿರಿಯ ವಕೀಲ ಸ್ಥಾನ ಪಡೆಯಲು ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ್ದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಆ ವಕೀಲ ಅನುಸರಿಸಿದ್ದ ಮಾರ್ಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವೇಳೆ ‘ಕೆಲವು ಯುವಕರು ಜಿರಳೆಗಳು ಇದ್ದಂತೆ. ಯಾವುದೇ ಉದ್ಯೋಗ ಪಡೆದುಕೊಳ್ಳಲಾಗದೇ ಅಥವಾ ಕೆಲಸದಲ್ಲಿ ಸರಿಯಾದ ಸ್ಥಾನ ಪಡೆದುಕೊಳ್ಳಲಾಗದೇ ವಿಫಲರಾಗುತ್ತಾರೆ. ಅಂಥಹ ಯುವಕರು ತಾವೇ ಮಾಧ್ಯಮಗಳಾಗಿ, ಸಾಮಾಜಿಕ ಮಾಧ್ಯಮಗಳಾಗಿ, ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸಮಾಜದ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು.
ನ್ಯಾಯಮೂರ್ತಿ ಸೂರ್ಯಕಾಂತ್ ಆಡಿದ ಈ ಮಾತುಗಳಿಂದ ಕೆರಳಿದ ದೇಶದ ಯುವ ಜನತೆ ಕಾಕ್ರೋಚ್ ಜನತಾ ಪಾರ್ಟಿ ಎಂಬ ಪಕ್ಷವನ್ನು ತೆರೆದು ವೆಬ್ಸೈಟ್ ರಚಿಸಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ನಿರ್ಮಿಸಿದೆ. ನಾವು ನಿರುದ್ಯೋಗಿಗಳು, ಸೋಮಾರಿಗಳು, ಯಾವಾಗಲೂ ಆನ್ಲೈನ್ನಲ್ಲಿ ಇರುತ್ತೇವೆ ಎಂಬ ಸಾಲನ್ನೂ ಸಹ ಬರೆದುಕೊಂಡು ಸೂರ್ಯಕಾಂತ್ ಮಾಡಿದ್ದ ಕಾಮೆಂಟ್ಗಳ ಮೂಲಕವೇ ಟ್ರೋಲ್ ಮಾಡಿದೆ.
ಕಾಕ್ರೋಚ್ ಪಕ್ಷದ ಸ್ಥಾಪಕ ಯಾರು?
ಹೀಗೆ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆ 30 ವರ್ಷದ ಅಭಿಜಿತ್ ದಿಪ್ಕೆ ಎನ್ನುವವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿದ್ದಾರೆ. ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ರಿಲೇಷನ್ ವಿದ್ಯಾರ್ಥಿಯಾಗಿರುವ ಇವರು 2020ರಿಂದ 2023ರವರೆಗೆ ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂಡದಲ್ಲಿ ಕೆಲಸ ಮಾಡಿದ್ದರು.
ನ್ಯಾಯಮೂರ್ತಿ ಅಭಿಜಿತ್ ದಿಪ್ಕೆ ಅವರ ಹೇಳಿಕೆಯ ಕುರಿತ ವರದಿಗಳನ್ನು ಕಂಡು ನೋವುಂಟುಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಭಿಜಿತ್ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕನಾಗಿ ನಾನು ಇದನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್ ಪಕ್ಷದ ಅಬ್ಬರ
ಇಂದು ( ಮೇ 20 ) ಮಧ್ಯಾಹ್ನ 1.45ರ ವೇಳೆಗೆ ಕಾಕ್ರೋಚ್ ಜನತಾ ಪಾರ್ಟಿ ಪಕ್ಷ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 4.1 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಮಟ್ಟದ ಹಿಂಬಾಲಕರನ್ನು ಸಂಪಾದಿಸಿದ್ದು, ಭಾರೀ ಸಂಚಲನ ಎಬ್ಬಿಸಿದೆ.