ಸದ್ಯ ಸಾಮಾಜಿಕ ಜಾಲತಾಣದಲ್ಲಿ ಜಿರಳೆ ಪಕ್ಷದ್ದೇ ಹಾವಳಿ. ಇದೇನಿದು ಹೊಸದಾಗಿ ಜಿರಳೆ ಪಕ್ಷ ಎಂದು ಗೊಂದಲಕ್ಕೀಡಾದರೆ ಅದರ ಹಿಂದಿನ ಮಾಹಿತಿಯನ್ನು ಚಿಕ್ಕದಾಗಿ ಹೇಳಿಬಿಡುತ್ತೇವೆ ಕೇಳಿ.
ಸುಪ್ರೀಂ ಕೋರ್ಟ್ನ ವಕೀಲನೊಬ್ಬ ಹಿರಿಯ ವಕೀಲನಾಗುವ ಸಲುವಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಹಿರಿಯ ವಕೀಲನ ಸ್ಥಾನ ಪಡೆಯಲು ವಕೀಲ ಅನುಸರಿಸಿದ್ದ ಮಾರ್ಗದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಲ್ಲದೇ ‘ಕೆಲವು ಯುವಕರು ಜಿರಳೆಗಳು ಇದ್ದಂತೆ. ಯಾವುದೇ ಉದ್ಯೋಗ ಪಡೆದುಕೊಳ್ಳಲಾಗದೇ ಅಥವಾ ಕೆಲಸದಲ್ಲಿ ಸರಿಯಾದ ಸ್ಥಾನ ಪಡೆದುಕೊಳ್ಳಲಾಗದೇ ವಿಫಲರಾಗುತ್ತಾರೆ. ಅಂಥಹ ಯುವಕರು ತಾವೇ ಮಾಧ್ಯಮಗಳಾಗಿ, ಸಾಮಾಜಿಕ ಮಾಧ್ಯಮಗಳಾಗಿ, ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಸಮಾಜದ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ’ ಎಂದು ಹೇಳಿಕೆ ನೀಡಿದ್ದರು.
ಹೀಗೆ ಸುಪ್ರೀಂ ನ್ಯಾಯಮೂರ್ತಿ ಸೂರ್ಯ ಕಾಂತ್ ಭಾರತದ ಯುವ ಜನತೆಯ ಕಾಲೆಳೆದಿದ್ದೇ ತಡ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪಬ್ಲಿಕ್ ರಿಲೇಷನ್ ವಿದ್ಯಾರ್ಥಿಯಾಗಿರುವ ಅಭಿಜಿತ್ ಜಿಪ್ಕೆ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಆರಂಭಿಸಿಯೇಬಿಟ್ಟರು. ಈ ಪಕ್ಷದ ಖಾತೆಗೆ ನಾಲ್ಕೇ ದಿನಕ್ಕೆ 40 ಲಕ್ಷ ಹಿಂಬಾಲಕರು ಬಂದಿದ್ದು ಭಾರೀ ಸಂಚಲನ ಮೂಡಿಸಿದೆ.
ಹೀಗೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಾರ್ಟಿ ತಾವು ಯಾವ ಪಕ್ಷದ ಪರವೂ ಅಲ್ಲ ಎಂದು ಘೋಷಣೆ ಮಾಡಿಕೊಂಡಿದ್ದು, ಸದ್ಯ ತನ್ನ ಅಧಿಕೃತ ಖಾತೆಯಲ್ಲಿ ತಮ್ಮನ್ನು ಸಂದರ್ಶನ ಮಾಡಲು ಸಂಪರ್ಕಿಸಿದ ಕೆಲ ಮಾಧ್ಯಮಗಳನ್ನು ಗೋಧಿ ಮೀಡಿಯಾಗಳೆಂದು ಉಲ್ಲೇಖಿಸಿ ಕಾಲೆಳೆದಿದೆ. ಬಿಜೆಪಿ ಪಕ್ಷದ ಪರ ಸುದ್ದಿ ಮಾಡುವ ಮಾಧ್ಯಮಗಳನ್ನು ಗೋಧಿ ಮೀಡಿಯಾ ಎಂದು ಕರೆಯಲಾಗುತ್ತದೆ ಎಂದು ಎಲ್ಲ ಎಐಗಳು ತಿಳಿಸಿವೆ.
ಈ ಮಾಧ್ಯಮಗಳು ತಮ್ಮನ್ನು ಸಂಪರ್ಕಿಸಿಸುತ್ತಿರುವುದರ ಕುರಿತು ಬರೆದುಕೊಂಡಿರುವ ಕಾಕ್ರೋಚ್ ಜನತಾ ಪಾರ್ಟಿ ‘ನಮ್ಮ ಪಕ್ಷವು ಗೋಧಿ ಮೀಡಿಯಾದ ಯಾವ ಆಂಕರ್ ಜತೆಗೂ ಚರ್ಚೆ ನಡೆಸಲು ಇಚ್ಛಿಸುವುದಿಲ್ಲ. ಹೀಗಾಗಿ ನೀವು ನಮ್ಮ ಜತೆ ಸಂದರ್ಶನ ನಡೆಸಲು ಅಥವಾ ಚರ್ಚೆ ನಡೆಸುವ ತೊಂದರೆ ತೆಗೆದುಕೊಳ್ಳಬೇಡಿ’ ಎಂದು ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ ಖಾತೆಗಳಲ್ಲಿ ಬರೆದುಕೊಂಡು ಚಾಟಿ ಬೀಸಿದೆ.