ಹಾವೇರಿ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯ 40 ಗ್ರಾಂ ಸರವನ್ನು ಕಳ್ಳತನ ಮಾಡಲಾಗಿದೆ. ಚಿನ್ನದ ಸರ ಕಸಿದು ಪರಾರಿಯಾಗುತ್ತಿದ್ದವನನ್ನು ಗ್ರಾಮಸ್ಥರು ಹಿಡಿದಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಳ್ಳಿಯ ಸಮೀಪ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ರಸ್ತೆ ಬದಿ ನಿಂತಿದ್ದ ಸಂತೋಷ್ ಗುಡ್ಡಪ್ಪ ಹಳೆಮನೆ ಎಂಬಾತ ಸರ ಕಳವು ಮಾಡಿದ್ದಾನೆ. ರಾಧಾ ಎಂಬುವರ 40 ಗ್ರಾಂ ಚಿನ್ನದ ಸರ ಕಸಿದುಕೊಂಡು ಓಡುತ್ತಿದ್ದ ಸಂತೋಷ್ ನನ್ನು ಗ್ರಾಮಸ್ಥರು ಹಿಡಿದಿದ್ದಾರೆ.
ಸಂತೋಷ್ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟೆ ನಿವಾಸಿಯಾಗಿದ್ದಾನೆ. ಈ ಬಗ್ಗೆ ಹಿರೇಕೆರೂರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.