ಬೆಂಗಳೂರು: ಜಲ ಸುಸ್ಥಿರತೆ ಮತ್ತು ಸಂರಕ್ಷಣೆ ಇಂದು ನಮ್ಮ ಮುಂದಿರುವ ಆದ್ಯತೆಯ ಮತ್ತು ಅತಿ ಅಗತ್ಯದ ಕೆಲಸ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈಗಾಗಲೇ ಗ್ರಾಮೀಣ ಭಾಗದ ಜಲಮೂಲಗಳ ಪುನರುಜ್ಜೀವನಕ್ಕೆ, ಕೆರೆಗಳ ಸಂರಕ್ಷಣೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ.
ಈಗ, ಜಲಕ್ಷಾಮವನ್ನು ಎದುರಿಸಲು, ಕೊಳವೆಬಾವಿಗಳ ಜಲ ಮರುಪೂರಣಕ್ಕೆ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ, ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ಕುಡಿಯುವ ನೀರಿನ ಕೊರತೆ ಎದುರಿಸುವ ಪ್ರದೇಶಗಳನ್ನು ಗುರುತಿಸಿ, ಶಾಶ್ವತ ಪರಿಹಾರ ರೂಪಿಸಲು ತಂತ್ರಜ್ಞಾನ ಆಧಾರಿತ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲು ಉದ್ದೇಶಿಸಲಾಗಿದೆ.
ಸ್ಪಾಂಜ್ ಜೋನ್ ತಂತ್ರಜ್ಞಾನದ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಬತ್ತಿ ಹೋಗುತ್ತಿರುವ ಕೊಳವೆಬಾವಿಗಳಿಗೆ ಮರುಜೀವ ನೀಡಬಹುದಾಗಿದ್ದು, ಪ್ರಸ್ತಾವಿತ ತಂತ್ರಜ್ಞಾನದ ಪ್ರಕಾರ, ಒಂದು ಇಡೀ ಗ್ರಾಮದ ನೀರಿನ ಅವಶ್ಯಕತೆಯನ್ನು ಪೂರೈಸಲು ಕೇವಲ ಒಂದು ಮರುಪೂರಣ ಯುನಿಟ್ ಸಾಕಾಗುತ್ತದೆ. ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಲಿದೆ ಎಂಬ ಸಂಗತಿಯು ತಿಳಿದುಬಂದಿದೆ.
ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಮೂಲಕ ‘ಗ್ರ್ಯಾಂಡ್ ಚಾಲೆಂಜ್’ ಸ್ಪರ್ಧೆ ನಡೆಸಿ ಸ್ವೀಕೃತವಾಗುವ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಗ್ರಾಮೀಣ ನೀರು ಸರಬರಾಜು ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳಲಾಗುವುದು.
ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ನವ ತಂತ್ರಜ್ಞಾನದ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು, ತಂತ್ರಜ್ಞಾನದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿ ವರದಿ ನೀಡಲು ತಜ್ಞರನ್ನು ಒಳಗೊಂಡ ವಿಶೇಷ ತಾಂತ್ರಿಕ ಸಮಿತಿಯನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ, ನೀರಿನ ತೀವ್ರ ಅಭಾವವಿರುವ ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.