ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕದ ಪರ ನಿರ್ಣಯಕ್ಕೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ತೀವ್ರಗೊಳಿಸಿದ್ದು, ಬೆಳಗಾವಿ ಮಹಾನಗರ ಪಾಲಿಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಒಂದು ಹಂತದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ಯತ್ನಿಸಿಲಾಯಿತು.
ಜಿಲ್ಲಾಧಿಕಾರಿ ಕಚೇರಿಯಿಂದ ಮಹಾನಗರ ಪಾಲಿಕೆ ವರೆಗೆ ಸಾ.ರಾ ಗೋವಿಂದ, ಕನ್ನಡ ಕುಮಾರ್, ಅಶೋಕ ಚಂದರಗಿ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ಸವಿರಾರು ಕನ್ನಡಪರ ಹೋರಾಟಗಾರರು ಬೆಳಗವೈ ಪಾಲಿಕೆಯತ್ತ ಮುನ್ನುಗ್ಗಿದ್ದರು.
ಪಾಲಿಕೆಯಲ್ಲಿ 2004ರಲ್ಲಿ ಮಹಾರಾಷ್ಟ್ರ ಪರ ನಿರ್ಣಯವಾಗಿದೆ. ಸದ್ಯ ಪಾಲಿಕೆಯಲ್ಲಿ ಕನ್ನಡಿಗರೇ ಮೇಯರ್, ಉಪಮೇಯರ್ ಇದ್ದಾರೆ. ಕರ್ನಾಟಕದ ಪರ ನಿರ್ಣಯಕ್ಕೆ ಹಲವು ಸಲ ಬೇಡಿಕೆ ಇಡಲಾಗಿದೆ. ಬೇಡಿಕೆ ಮಣಿಯದ ಹಿನ್ನೆಲೆಯಲ್ಲಿ ಕನ್ನಡ ಪರ ಹೋರಾಟಗಾರರಿಂದ ಪಾಲಿಕೆಗೆ ಮುತ್ತಿಗೆ ಯತ್ನ ನಡೆದಿದೆ. ಕನ್ನಡ ಪರ ಹೋರಾಗಾರರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗುತ್ತಿದ್ದಂತೆ ಆರ್ ಟಿ ಓ ವೃತ್ತದ ಬಳಿ ಹೋರಾಟಗಾರರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ವಾಅಟಾಳ್ ನಾಗರಾಜ್ ಸೇರಿದಂತೆ ನೂರಾರು ಹೋರಾಟಗಾರರನ್ನು ವಶಕ್ಕೆ ಪಡೆದರು.
ಜೂನ್ 2ರ ಗಡುವು:
ಇದಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಜೂನ್ 2ರೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಮತ್ತು ಮಹಾಜನ್ ವರದಿ ಜಾರಿಗೆ ತರುವ ನಿಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಜೂನ್ 4ರಂದು ಬೆಂಗಳೂರಿನಲ್ಲಿ ಸಭೆ ಕರೆದು, ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಯಾವ ನೆಲದಲ್ಲಿದೆ? ಎಂಬುದನ್ನು ಪಾಲಿಕೆಯಲ್ಲಿ ಅಧಿಕಾರದಲ್ಲಿ ಇರುವವರು ಅರ್ಥ ಮಾಡಿಕೊಳ್ಳಬೇಕು. ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ. ಇದು ಕರ್ನಾಟಕದ ಅವಿಭಾಜ್ಯ ಅಂಗ. ಮಹಾಜನ್ ವರದಿ ಜಾರಿ ಆಗಲೇಬೇಕು ಎಂದು ನಿರ್ಣಯ ಮಾಡಬೇಕು. ಮಾಡದಿದ್ದರೆ ಬೆಳಗಾವಿಯಲ್ಲಿ ಕಂಡು ಕೇಳರಿಯದ ರೀತಿಯ ಕ್ರಾಂತಿ ಆಗುತ್ತದೆ ಎಂದರು.
ಇಂದಿನಿಂದ ಒಂದು ವಾರದೊಳಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಮಹಾನಜನ್ ವರದಿ ಜಾರಿಗೆ ತರಬೇಕು ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ನಾವು ಗಡುವು ಕೊಡುತ್ತೇವೆ. ಆಗಲೂ ನೀವು ಎಚ್ಚೆತ್ತುಕೊಳ್ಳದಿದ್ದರೆ, ಜೂನ್4ರಂದು ಬೆಂಗಳೂರಲ್ಲಿ ಎಲ್ಲಾ ಕನ್ನಡ ಸಂಘಟನೆಗಳು ಸಭೆ ಸೇರುತ್ತೇವೆ. ಪ್ರವೀಣ ಶೆಟ್ಟಿ, ಶಿವರಾಮೇಗೌಡ, ನಾರಾಯಣಗೌಡ ಸೇರಿ ಎಲ್ಲ ಬಣಗಳ ಕನ್ನಡ ಸಂಘಟನೆಗಳ ಮುಖಂಡರನ್ನು ಸಭೆಗೆ ಆಹ್ವಾನಿಸುತ್ತೇವೆ. ಅಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಕರೆ ಕೊಡುತ್ತೇವೆ ಎಂದರು.
ಬಂದ್ ದಿನ ನಾವು ಬೆಳಗಾವಿಗೆ ಬರುತ್ತೇವೆ. ಬೆಳಗಾವಿಯಿಂದಲೇ ಬಹುದೊಡ್ಡ ಕ್ರಾಂತಿ ಆರಂಭವಾಗಲಿದೆ. ಇಲ್ಲಿಂದಲೇ ಹೊಸ ಕ್ರಾಂತಿಗೆ ದಿಕ್ಸೂಚಿ ಸಿಗಲಿದೆ. ಇಡೀ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜನರು ಬೆಳಗಾವಿಯ ಜೊತೆ ನಿಲ್ಲಬೇಕು. ನಮ್ಮ ದೇಹದಲ್ಲಿ ರಕ್ತದ ಕೊನೆ ಹನಿ ಇರೋವರೆಗೂ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.