ಉಡುಪಿ: ಅಪಘಾತದಲ್ಲಿ ಮೃತಪಟ್ಟ ಮಹಿಳೆ ಮೇಲಿನ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಕೊಲ್ಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲ್ಲೂರಿನ ಕಲ್ಯಾಣಿ ಗುಡ್ಡೆ ನಿವಾಸಿ ಹೇಮಂತ್(40) ಬಂಧಿತ. ಆರೋಪಿ ಬಂಧಿತನಿಂದ 2.07 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 17 ರಂದು ಕೊಲ್ಲೂರು ಸಮೀಪ ದಳಿಯಲ್ಲಿ ಕೇರಳ ಮೂಲದ ಪ್ರವಾಸಿಗರು ಇದ್ದ ಜೀಪ್ ಗೆ ಮೀನು ಸಾಗಣೆ ವಾಹನ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿದ್ದರು. ಕೇರಳದ ಜ್ಯೋತಿ ಮತ್ತು ಅರಿಯಾ ಅನೂಪ್ ಮೃತಪಟ್ಟಿದ್ದು, ಜ್ಯೋತಿಯವರ ಧರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದವು.
ಅಪಘಾತದ ವೇಳೆ ಜನಸಂದಣಿಯಲ್ಲಿ ಗೊಂದಲದ ನಡುವೆ ಚಿನ್ನಾಭರಣ ಕಳವು ಮಾಡಲಾಗಿತ್ತು. ಮೃತ ಜ್ಯೋತಿ ಕುಟುಂಬದವರು ಘಟನೆ ನಡೆದ ಒಂದು ವಾರದ ನಂತರ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.