LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯುಬಿಡಿಟಿ ಕಾಲೇಜು ದೇಶದ ತಾಂತ್ರಿಕ ಶಿಕ್ಷಣದ ಹೆಮ್ಮೆಯ ಪಿಲ್ಲರ್: ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್

ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡುತ್ತಿದೆ. 2047ರ ವೇಳೆಗೆ ನಮ್ಮ ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ಯುವ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದ್ದು, ದೇಶದ ಪ್ರಗತಿಗಾಗಿ ಯುವಶಕ್ತಿ ಮಾದಕ ದ್ರವ್ಯಗಳಂತಹ ವ್ಯಸನಗಳಿಂದ ದೂರವಿದ್ದು ದೇಶದ ಅಭಿವೃದ್ದಿಗೆ ರಾಯಭಾರಿಗಳಾಗಬೇಕೆಂದು ಯುವ ಇಂಜಿನಿಯರ್‌ಗಳ ಕುರಿತು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್  ಕರೆ ನೀಡಿದರು.

ದಾವಣಗೆರೆಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ (ಪ್ಲಾಟಿನಂ ಜುಬಿಲಿ) ಸಮಾರಂಭದಲ್ಲಿ ಪ್ರಧಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಹೆಮ್ಮೆಯ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು

1951ರಲ್ಲಿ ಸ್ಥಾಪನೆಯಾದ ಯು.ಬಿ.ಡಿ.ಟಿ. ಕಾಲೇಜು ಕರ್ನಾಟಕದ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಐತಿಹಾಸಿಕ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಂಸ್ಥೆಯನ್ನು ಕಟ್ಟಲು ಕಾರಣರಾದ ಬ್ರಹ್ಮಪ್ಪ ದೇವೇಂದ್ರಪ್ಪ ತವಣಪ್ಪನವರ ದೂರದೃಷ್ಟಿ ಹಾಗೂ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಉಪರಾಷ್ಟ್ರಪತಿಗಳು ಅವರ ದೂರದೃಷ್ಟಿಯ ಕೊಡುಗೆಯನ್ನು ಸ್ಮರಿಸಿದರು.

“ಕಳೆದ 75 ವರ್ಷಗಳಲ್ಲಿ ಈ ಸಂಸ್ಥೆಯು 30,000ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು, ಇದು ಕೇವಲ ಸಂಸ್ಥೆಯಲ್ಲ, ದೇಶದ ತಾಂತ್ರಿಕ ಶಿಕ್ಷಣದ ಹೆಮ್ಮೆಯ ಪಿಲ್ಲರ್” ಎಂದು ಶ್ಲಾಘಿಸಿದರು.

ನವ ಭಾರತ ನಿರ್ಮಾಣ ಮತ್ತು ತಂತ್ರಜ್ಞಾನ ಕ್ರಾಂತಿ; ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳ ಮೂಲಕ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಪ್ರಸ್ತುತ ಭಾರತವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ಗ್ರೀನ್ ಎನರ್ಜಿಯಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ನಾವು ಕೇವಲ ತಂತ್ರಜ್ಞಾನವನ್ನು ಬೆಳೆಸುತ್ತಿಲ್ಲ, ಬದಲಿಗೆ ಇಡೀ ಮಾನವಕುಲಕ್ಕೆ ಒಳಿತಾಗುವಂತಹ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದ್ದೇವೆ. ಈ ತಂತ್ರಜ್ಞಾನ ಕ್ರಾಂತಿಯ ಸಾರಥ್ಯವನ್ನು ಇಂದಿನ ಯುವ ಇಂಜಿನಿಯರ್‌ಗಳು ವಹಿಸಿಕೊಳ್ಳಬೇಕು” ಎಂದು ಅವರು ಆಶಿಸಿದರು.

ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಉಪರಾಷ್ಟ್ರಪತಿಗಳ ಕಳಕಳಿಯ ಮನವಿ: ತಮ್ಮ ಭಾಷಣದ ಮಧ್ಯೆ ಯುವಜನತೆಗೆ ಅತ್ಯಂತ ಕಟ್ಟುನಿಟ್ಟಾದ ಹಾಗೂ ಪ್ರೀತಿಯ ಸಂದೇಶ ನೀಡಿದ ಉಪರಾಷ್ಟ್ರಪತಿಗಳು, ಮಾದಕ ದ್ರವ್ಯಗಳ ಪಿಡುಗಿನ ವಿರುದ್ಧ ಧ್ವನಿ ಎತ್ತಿದರು. ಯುವಜನತೆ ಮಾದಕ ದ್ರವ್ಯಗಳ ವ್ಯಸನದಿಂದ ಸಂಪೂರ್ಣ ದೂರವಿರಬೇಕು. ನಾವಷ್ಟೇ ಅಲ್ಲ, ನಮ್ಮ ಸ್ನೇಹಿತರು, ನಮ್ಮ ಕುಟುಂಬ ಹಾಗೂ ಇಡೀ ಸಮಾಜವೇ ಒಟ್ಟಾಗಿ ಒಕ್ಕೊರಲಿನಿಂದ ಡ್ರಗ್ಸ್ ಗೆ ‘ನೋ’ (Say No to Drugs) ಎಂದು ಹೇಳಬೇಕು. ನಿಮ್ಮ ಬುದ್ಧಿಶಕ್ತಿ ನಿಮ್ಮ ನಿಯಂತ್ರಣದಲ್ಲಿರಬೇಕೇ ವಿನಃ ಯಾವುದೇ ವ್ಯಸನಗಳಿಗಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಹಳೆಯ ವಿದ್ಯಾರ್ಥಿಗಳು; ಯು.ಬಿ.ಡಿ.ಟಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇಂದು ವಿಶ್ವದ ವಿವಿಧ ಮೂಲೆಗಳಲ್ಲಿ ಕಾರ್ಪೊರೇಟ್, ರಾಜಕೀಯ, ಆಡಳಿತ, ಎನ್‌ಜಿಒ ಹಾಗೂ ಕಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವುದು ಸಂಸ್ಥೆಯ ನಿಜವಾದ ಶಕ್ತಿಯಾಗಿದೆ ಎಂದು ಉಪರಾಷ್ಟ್ರಪತಿಗಳು ಬಣ್ಣಿಸಿದರು. ಕಾಲೇಜಿನ ಶಿಕ್ಷಕ ವೃಂದದ ಸೇವೆಯನ್ನು ಕೊಂಡಾಡಿದ ಅವರು, ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು ಎಂದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಕರ್ನಾಟಕ ರಾಜ್ಯವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಇಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿಭಾವಂತ ಯುವಕರೇ ಕಾರಣ ಎಂದು ಶ್ಲಾಘಿಸಿದರು.

 ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜು ಕಳೆದ 7 ದಶಕಗಳಿಗೂ ಹೆಚ್ಚು ಕಾಲದಿಂದ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸಿದೆ. ಇಲ್ಲಿ ಓದಿದ ಸಾವಿರಾರು ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಆಡಳಿತಾಧಿಕಾರಿಗಳಾಗಿ ದೇಶ-ವಿದೇಶಗಳಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.

ವಿಕಸಿತ ಭಾರತಕ್ಕೆ ತಂತ್ರಜ್ಞಾನದ ಬಲ: 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಸಂಕಲ್ಪದತ್ತ ದೇಶ ಸಾಗುತ್ತಿದ್ದು, ಇಂತಹ ಪ್ರಗತಿಯಲ್ಲಿ ತಾಂತ್ರಿಕ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಗ್ರೀನ್ ಟೆಕ್ನಾಲಜಿ, ಸೈಬರ್ ಭದ್ರತೆ ಮತ್ತು ಮಿಕಂಡಕ್ಟರ್‌ಗಳAತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಜಾಗತಿಕ ನಾಯಕತ್ವ ವಹಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳು ಯುವಕರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಿವೆ. ದೇಶದ ಯುವಶಕ್ತಿಯು ದೊಡ್ಡ ಕನಸುಗಳನ್ನು ಕಾಣುತ್ತಾ, ನಿರಂತರವಾಗಿ ಕಲಿಯುತ್ತಾ ತಮ್ಮ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ಭಾರತವನ್ನು ‘ವಿಶ್ವಗುರು’ ಮಾಡಲು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ರಾಜ್ಯಪಾಲರು ಯುವ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ಇದು ಕೇವಲ ಒಂದು ಸಂಸ್ಥೆಯ ವಾರ್ಷಿಕ ಆಚರಣೆಯಲ್ಲ, ಬದಲಿಗೆ ದಶಕಗಳಿಂದ ಈ ಸಂಸ್ಥೆಯು ಸಮಾಜಕ್ಕೆ ನೀಡಿದ ಜ್ಞಾನ, ಸಂಸ್ಕೃತಿ ಮತ್ತು ತತ್ವಜ್ಞಾನದ ಪರಂಪರೆಯ ಸಂಭ್ರಮವಾಗಿದೆ, ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕಾಲೇಜು ದೇಶಕ್ಕೆ ಸಾವಿರಾರು ಅತ್ಯುತ್ತಮ ಎಂಜಿನಿಯರ್‌ಗಳು, ತಂತ್ರಜ್ಞರು ಹಾಗೂ ಆಡಳಿತಗಾರರನ್ನು ಕೊಡುಗೆಯಾಗಿ ನೀಡಿದೆ ಎಂದರು.

ದೇಶದ ಸರಾಸರಿ ತಲಾವಾರು ಆದಾಯ 2.5 ಲಕ್ಷ ರೂಪಾಯಿಗಳಾಗಿದ್ದರೆ, ಕರ್ನಾಟಕದ ತಲಾವಾರು ಆದಾಯವು ಸುಮಾರು 4.3 ಲಕ್ಷ ರೂಪಾಯಿಗಳಷ್ಟಿದೆ. ಇದಕ್ಕೆ ರಾಜ್ಯದಲ್ಲಿ ಹಿಂದಿನಿಂದಲೂ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗೆ ನೀಡಲಾದ ಮಹತ್ವವೇ ಮುಖ್ಯ ಕಾರಣ ಎಂದು ವರದಿಯಾಗಿದೆ. ಸ್ವಾಮಿ ವಿವೇಕಾನಂದರು ಮತ್ತು ಜಮ್‌ಶೆಡ್‌ಜೀ ಟಾಟಾ ಅವರ ನಡುವಿನ ಐತಿಹಾಸಿಕ ಭೇಟಿಯ ಪ್ರೇರಣೆಯಿಂದ ದೇಶದಲ್ಲಿ ಆರಂಭವಾದ ತಾಂತ್ರಿಕ ಕ್ರಾಂತಿ, ನಂತರದ ದಿನಗಳಲ್ಲಿ ಮೈಸೂರು ಮಹಾರಾಜರ ಬೆಂಬಲದೊಂದಿಗೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದು ತಿಳಿಸಿದರು.

ಕಳೆದ 10 ವರ್ಷಗಳ ಹಿಂದೆ ದೇಶದಲ್ಲಿ ಕೇವಲ 400 ರಷ್ಟಿದ್ದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಇಂದು 2 ಲಕ್ಷಕ್ಕೂ ಮೀರಿದೆ. ಇದರಲ್ಲಿ ಹೆಮ್ಮೆಯ ವಿಷಯವೆಂದರೆ, ದೇಶದ ಒಟ್ಟು ಸ್ಟಾರ್ಟ್‌ಅಪ್‌ಗಳ ಪೈಕಿ ಶೇಕಡಾ 18 ರಿಂದ 20 ರಷ್ಟು (ಅಂದರೆ 20,000 ಕ್ಕೂ ಹೆಚ್ಚು) ಸ್ಟಾರ್ಟ್‌ಅಪ್‌ಗಳು ಕರ್ನಾಟಕದಲ್ಲಿಯೇ ಇವೆ. ಅಷ್ಟೇ ಅಲ್ಲದೆ, ದೇಶದ 125 ಕ್ಕೂ ಹೆಚ್ಚು ಯೂನಿಕಾರ್ನ್‌ಗಳ ಪೈಕಿ 45 ಕ್ಕೂ ಹೆಚ್ಚು ಯೂನಿಕಾರ್ನ್‌ಗಳು ಕರ್ನಾಟಕದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯವು ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಏರೋಸ್ಪೇಸ್ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.

ಇಂದಿನ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟಿಕ್ಸ್ ಯುಗದಲ್ಲಿ ಕೇವಲ ಭೌತಿಕ ವಿಜ್ಞಾನ ಮಾತ್ರವಲ್ಲದೆ, ಮಾನವನ ಪ್ರಜ್ಞೆಯನ್ನು ಜಾಗೃತಗೊಳಿಸುವ ಆಧ್ಯಾತ್ಮಿಕ ಮತ್ತು ತತ್ವಶಾಸ್ತ್ರದ ಜ್ಞಾನವೂ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಜ್ಞಾನದ ಜೊತೆಗೆ ಆಧ್ಯಾತ್ಮಿಕತೆಯು ಸಮ್ಮಿಲನಗೊಂಡಾಗ ಮಾತ್ರ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿತ್ವಗಳು ರೂಪುಗೊಳ್ಳಲು ಸಾಧ್ಯ ಎಂದು ಕರೆ ನೀಡಿದರು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಅಳವಡಿಸುವುದರಿಂದ ಮಾತ್ರ ಪರಿಪೂರ್ಣ ವ್ಯಕ್ತಿತ್ವದ ನಾಗರಿಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಸಾಧ್ಯ. ಇದು ಮಾನವನ ಪ್ರಜ್ಞೆ ಮತ್ತು ವ್ಯಕ್ತಿತ್ವವನ್ನು ಉನ್ನತೀಕರಿಸಲು ನೆರವಾಗುತ್ತದೆ,” ಎಂದು ಪ್ರತಿಪಾದಿಸಿದರು.

ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ಈ ಸಂಸ್ಥೆಯು ನಮ್ಮೆಲ್ಲರ ಕಲ್ಪನೆಗೂ ಮೀರಿ ಬೆಳೆದಿದೆ. 1951ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಬ್ರಹ್ಮಪ್ಪ ದೇವೇಂದ್ರಪ್ಪ ತಾವಣನಪ್ಪನವರ ಅಂದಿನ ಮೈಸೂರು ಮಹಾರಾಜರು ನೀಡಿದ ಬೆಂಬಲ ಮತ್ತು ಕೊಡುಗೆಗಳನ್ನು ಅವರು ಶ್ಲಾಘನಿಯವಾದದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಹಾಗೂ ಘಟಕ ಕಾಲೇಜುಗಳ ಪೈಕಿ, ಈ ಕಾಲೇಜು ಕರ್ನಾಟಕ ರಾಜ್ಯದಲ್ಲೇ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು. ಈಗಾಗಲೇ ಸಂಸ್ಥೆಯು ‘ರಾಷ್ಟ್ರೀಯ ಮಾನ್ಯತಾ ಮಂಡಳಿ’ (NBA) ಮಾನ್ಯತೆಯನ್ನು ಪಡೆದುಕೊಂಡಿರುವುದು ಇದರ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದರು.

ಇಂದಿನ ಯುಗದಲ್ಲಿ ಕೇವಲ ಪದವಿ ಮುಖ್ಯವಲ್ಲ, ಕೌಶಲ್ಯಾಭಿವೃದ್ಧಿ (Skilling) ಅತ್ಯಂತ ಅಗತ್ಯವಾಗಿದೆ. ಕಾಲೇಜಿನಲ್ಲಿ ಈಗಾಗಲೇ ಎರಡು ಕೌಶಲ್ಯ ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು. ಸಂಸ್ಥೆಯ ನೂರನೇ ವರ್ಷದ (Centenary) ಸಂಭ್ರಮಾಚರಣೆಯ ವೇಳೆಗೆ ತಂತ್ರಜ್ಞಾನ ಮತ್ತಷ್ಟು ಮುನ್ನಡೆಯಲಿದ್ದು, ಜಗತ್ತಿನ ಆವಿಷ್ಕಾರಗಳಿಗೆ ತಕ್ಕಂತೆ ನಾವು ಸಾಗಬೇಕಿದೆ ಎಂದು ತಿಳಿಸಿದರು.

ಕುಲಸಚಿವರು ಡಾ.ಎಸ್.ವಿದ್ಯಾಶಂಕರ್ ಮಾತನಾಡಿ, ನಾಡಿನ ಜ್ಞಾನ ಪರಂಪರೆಯ ಕೀರ್ತಿಯನ್ನು ಹೊತ್ತು, ‘ವಿದ್ಯೆಯ ಬೆಳಕು, ಸೇವೆಯ ಧರ್ಮ’ ಎಂಬ ಆದರ್ಶವನ್ನು ಜೀವನ ಮೌಲ್ಯವಾಗಿ ಸ್ವೀಕರಿಸಿರುವ ಈ ಮಹಾನ್ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುಬಿಡಿಟಿ ಕಾಲೇಜು, 1951 ರಲ್ಲಿ ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತಾವಣನಪ್ಪನವರ ದೂರದರ್ಶಿತ್ವ ಹಾಗೂ ದಾನಚಿಂತನೆ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಶೀರ್ವಾದದೊಂದಿಗೆ ಸ್ಥಾಪಿತವಾಗಿತ್ತು. ಕಳೆದ 75 ವೈಭವಯುತ ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಉತ್ಕೃಷ್ಟತೆ, ಶಿಸ್ತು, ನಾವೀನ್ಯತೆ ಹಾಗೂ ಸಮಾಜ ಸೇವೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿಯವರೆಗೆ ಈ ಸಂಸ್ಥೆಯಿಂದ 30,000ಕ್ಕೂ ಹೆಚ್ಚು ಪದವೀಧರರು ಹೊರಬಂದಿದ್ದು, ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಎಂಜಿನಿಯರಿಂಗ್, ಉದ್ಯಮ, ಆಡಳಿತ, ಸಂಶೋಧನೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು.

ವಿಟಿಯು ದೇಶದಲ್ಲೇ ಅತಿ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಗುಣಮಟ್ಟದ ತಾಂತ್ರಿಕ ಶಿಕ್ಷಣ, ಸಂಶೋಧನೆ ಹಾಗೂ ಉದ್ಯಮದ ಸಹಭಾಗಿತ್ವವನ್ನು ಉತ್ತೇಜಿಸುತ್ತಿದೆ. ಇತ್ತೀಚೆಗೆ ಮೇ 22 ರಂದು ಪ್ರಾಯೋಗಿಕ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲೇ ವಾಟ್ಸಾಪ್ ಮೂಲಕ ಫಲಿತಾಂಶ ಪ್ರಕಟಿಸಿ ಹೊಸ ದಾಖಲೆ ಬರೆದಿದೆ. ಐಐಟಿ, ಐಐಎಸ್‌ಸಿ ಮಾದರಿಯಲ್ಲಿ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದು, 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೇಂದ್ರೀಕೃತ ಇಂಟರ್ನ್‌ಶಿಪ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ. ಯುಬಿಡಿಟಿ ಕಾಲೇಜು ಕರ್ನಾಟಕದಲ್ಲೇ ಏಕೈಕ ಎನ್.ಬಿ.ಎ ಮಾನ್ಯತೆ ಪಡೆದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಾಗಿದ್ದು, ಕಟಿಂಗ್-ಎಡ್ಜ್ ತಂತ್ರಜ್ಞಾನದಲ್ಲಿ 200ಕ್ಕೂ ಹೆಚ್ಚು ಡಾಕ್ಟರೇಟ್ ಪದವೀಧರರನ್ನು ಸೃಷ್ಟಿಸಿದೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ಸರ್ಕಾರಿ ಸಂಸ್ಥೆಗಳಿಂದ 5 ಕೋಟಿಗೂ ಹೆಚ್ಚು ಅನುದಾನವನ್ನು ಪಡೆದುಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಕಾಲೇಜು 75 ವರ್ಷಗಳನ್ನು ಪೂರ್ಣಗೊಳಿಸಿದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ಮಾಜಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.‌ ಎಸ್. ಮಲ್ಲಿಕಾರ್ಜುನ್‌, ‌ ದಾವಣಗೆರೆ ಜಿಲ್ಲೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, AICTE ಅಧ್ಯಕ್ಷರಾದ ಟಿ. ಜಿ. ಸೀತಾರಾಮ್ ಉಪಸ್ಥಿತರಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸಿದ್ಧರಾಮಯ್ಯ ಮುನಿಸಿನಿಂದ ಕೈತಪ್ಪಿದ ಸಚಿವ ಸ್ಥಾನ..? ಮನವೊಲಿಸಲು ಜಮೀರ್ ಅಹ್ಮದ್ ಕಸರತ್ತುಇಸ್ರೇಲ್, ಅಮೆರಿಕ ದಾಳಿಯಲ್ಲಿ ಮೃತಪಟ್ಟ 131 ದಿನಗಳ ನಂತರ ಜು. 9ರಂದು ಇರಾನ್ ಸುಪ್ರೀಂ ಲೀಡರ್ ಖಮೇನಿ ಅಂತ್ಯಕ್ರಿಯೆSHOCKING: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವಿಷಕಾರಿ ಅನಿಲ ಸೇವಿಸಿ ನಾಲ್ವರು ಸಾವುವಿವಾಹಿತೆಗೆ ಮತ್ತು ಬರುವ ಪಾನೀಯ ಕುಡಿಸಿ ರೇಪ್, ಬೆತ್ತಲೆ ಚಿತ್ರ ಸೆರೆಹಿಡಿದು ಬ್ಲಾಕ್ ಮೇಲ್BREAKING: ಇನ್ನು ಯಾರೂ ಒಂದು ರೂಪಾಯಿ ಲಂಚ ಕೊಡಬೇಕಿಲ್ಲ: ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸಲು ಸಿಎಂ ಡಿಕೆ ಮಹತ್ವದ ಹೆಜ್ಜೆಶಿವಮೊಗ್ಗ: ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿ ಶವ ಪತ್ತೆಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣ: ಚಿನ್ನಯ್ಯನ ಬ್ರೇನ್ ಮ್ಯಾಪಿಂಗ್ ಹಾಗೂ ರಿಟ್ ಅರ್ಜಿ ತನಿಖೆ ನಡೆಸುವಂತೆ SITಗೆ ಗಿರೀಶ್ ಮಟ್ಟಣ್ಣನವರ್ ದೂರುBREAKING: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಯೋಜನೆ ಸೌಲಭ್ಯ ಪಡೆಯಲು ಮತ್ತೆ ಅರ್ಜಿ ಸಲ್ಲಿಸಬೇಕು: ಸಿಎಂ ಡಿಕೆ ಮಾಹಿತಿದೇಶದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಕೋಟ್ಯಂತರ ರೂ ಅಕ್ರಮ ಫಂಡಿಂಗ್ ಆರೋಪ: ಕರ್ನಾಟಕದ ನಾಲ್ವರು ಸೇರಿ 7 ಜನರ ವಿರುದ್ಧ FIR ದಾಖಲುಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಯೂ  ತಿಳಿಯಲೇಬೇಕಾದ ಸೀಕ್ರೆಟ್ ಪಿಎಫ್ ಕಟ್ ಆದ್ರೆ ಸಿಗುತ್ತೆ ₹7 ಲಕ್ಷದ ಬಿಗ್ ಇನ್ಶೂರೆನ್ಸ್ ಬೆನಿಫಿಟ್