ಮೊನ್ನೆ ( ಮೇ 28 ) ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಮಹತ್ವದ ದಿನವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಬಿರುಗಾಳಿಯೇ ಬೀಸಿತು. ಹಲವು ದಿನಗಳಿಂದ ವದಂತಿ ಎಂದೇ ಕರೆಸಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಬದಲಾವಣೆ ವಿಚಾರ ಸತ್ಯವಾಗಿದ್ದು, ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದಾರೆ.
ರಾಜ್ಯವನ್ನು ದೇವರಾಜು ಅರಸು ಬಳಿಕ ಅತಿಹೆಚ್ಚು ಕಾಲ ಆಳಿದ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಣೆ ಮಾಡಿದರು. ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಅವರ ಸಿದ್ಧಾಂತ ಹಾಗೂ ತತ್ವಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡ ಸಾಮಾನ್ಯ ಜನರು ಕೋಮುಗಲಭೆ ವಿರುದ್ಧ ಸದಾ ಹೋರಾಡಿ, ಸರ್ವರೂ ಸಮಾನರು ಎಂಬ ತತ್ವವನ್ನು ಪಾಲಿಸಿ ಬಡವರ ಪರ ಕೆಲಸ ಮಾಡಿದ ಸಿಎಂ ಎಂದು ಕೊಂಡಾಡಿದರು.
ಒಂದೆಡೆ ಸಮಾನತೆಯ ಕೂಗು ಕೇಳಿಬಂದರೆ ಮತ್ತೊಂದೆಡೆ ಇದೇ ವೇಳೆ ಕೋಮುಗಲಭೆ ಪ್ರಿಯರು ಸಿದ್ದರಾಮಯ್ಯ ರಾಜೀನಾಮೆಯನ್ನು ಸಂಭ್ರಮಿಸಿದರು. ಸಾವನ್ನೇ ಸಂಭ್ರಮಿಸುವ ಕಾಲದಲ್ಲಿ ಮುಖ್ಯಮಂತ್ತಿ ನಿವೃತ್ತಿ ಸಂಭ್ರಮಾಚರಣೆ ಆಶ್ಚರ್ಯವೇನಲ್ಲ. ಆದರೆ ಅದಕ್ಕೆ ಬಳಸಿರುವ ವಿಷಯ ಆಶ್ಚರ್ಯ ಹಾಗೂ ಕೋಮು ವಿಷ ಬೀಜ ಅವರ ಮನಸ್ಸಿನಲ್ಲಿ ಯಾವ ಮಟ್ಟಿಗೆ ನಾಟಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿಜಯ್ ಸಾಯಿ ಎಂಬ ಬಳಕೆದಾರ ಕಳೆದ ಬಾರಿ ದಸರಾವನ್ನು ಮಹಾನ್ ಸಾಧಕಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಿದ ವಿಷಾರವನ್ನು ಎಳೆತಂದು ಸಿದ್ದು ರಾಜೀನಾಮೆ ಸಂಭ್ರಮಿಸಿದ್ದಾನೆ. ಬಾನು ಮುಷ್ತಾಕ್ ಹಾಗೂ ಸಿದ್ದರಾಮಯ್ಯ ದಸರಾ ಉದ್ಘಾಟಿಸುತ್ತಿರುವ ಫೋಟೊ ಹಂಚಿಕೊಂಡಿರುವ ಈತ ‘ನೀವು ಯಾರೇ ಆಗಿರಿ. ದೇವಿ ಚಾಮುಂಡೇಶ್ವರಿ ಹಾಗೂ ಅವಳ ಸಾಮ್ರಾಜ್ಯದ ಜತೆ ಆಟ ಆಡಿ ತಪ್ಪಿಸಿಕೊಳ್ಳಲು ಆಗಲ್ಲ. ನಿಮ್ಮ ಕಥೆ ಎಲ್ಲಿ ಮುಗಿಯಬೇಕೋ ಅಲ್ಲೇ ಮುಗಿಯುತ್ತೆ’ ಎಂದು ಬರೆದುಕೊಂಡಿದ್ದಾನೆ.
ಈ ಮೂಲಕ ಹಿಂದೂ ದೇವರ ಹಬ್ಬವನ್ನು ಮುಸ್ಲಿಂ ಮಹಿಳೆಯಿಂದ ಉದ್ಘಾಟನೆ ಮಾಡಿಸಿದ್ದಕ್ಕೆ ಸ್ವತಃ ಚಾಮುಂಡೇಶ್ವರಿಯೇ ಏಳೆಂಟು ತಿಂಗಳ ಸಮಯ ತೆಗೆದುಕೊಂಡು ಸೇಡು ತೀರಿಸಿಕೊಂಡಿದ್ದಾಳೆ ಎಂದು ಈತ ಬರೆದುಕೊಂಡಿದ್ದಾನೆ. ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯೆಯನ್ನು ನೀಡಿದ್ದು, ಬಳಕೆದಾರನ ನೀಚ ಮನಸ್ಥಿತಿಗೆ ತಿರುಗೇಟು ಕೊಟ್ಟಿದ್ದಾರೆ ಹಾಗೂ ಅನಕ್ಷರಸ್ಥ ಎಂದು ಹೀಯಾಳಿಸಿದ್ದಾರೆ.
ಸೇಡು ತೀರಿಸಿಕೊಳ್ಳುವುದು ದೇವರ ಗುಣವಲ್ಲ ಎಂಬ ದೊಡ್ಡ ಮಾತನ್ನು ಓರ್ವ ಬಳಕೆದಾರ ಆಡಿದ್ದು, ಎಂಟು ವರ್ಷಗಳ ಕಾಲ ಸಿಎಂ ಆಗಿ ಮೆರೆದವರ ಕುರಿತು ಇಂತಹ ಪೋಸ್ಟ್ ಹಾಕುವುದು ಅರ್ಥಹೀನ ಎಂದಿದ್ದಾರೆ. ಅಲ್ಲದೇ ಸಿದ್ದು ಎರಡು ಬಾರಿ ಸಿಎಂ ಆಗಿದ್ದಾರೆ, ಸೇಡು ತೀರಿಸಿಕೊಳ್ಳಲು ಇಷ್ಟು ದಿನ ಬೇಕಿತ್ತಾ ಎಂದೆಲ್ಲ ಪಾಠ ಮಾಡಿದ್ದಾರೆ.
ಒಟ್ಟಿನಲ್ಲಿ ಎಲ್ಲರೂ ಒಂದೇ ಎನ್ನುವ ಮನಸ್ಥಿತಿ ಇರುವ ವ್ಯಕ್ತಿ ಕುರಿತು ಜಾತಿ ಹಾಗೂ ಧರ್ಮದ ಮದ ಏರಿರುವ ಕ್ರಿಮಿಗಳು ಏನೇ ಆದರೂ ಮಾತನಾಡುವುದನ್ನು ಬಿಡುವುದಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.