ಮುಂಬೈ: ಸಿದ್ದರಾಮಯ್ಯ ಅವರ ಬಗ್ಗೆ ನನಗಿದ್ದ ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ಮಹಾರಾಷ್ಟ್ರ ಶಿವಸೇನೆ(ಯುಬಿಟಿ) ರಾಜ್ಯಸಭೆ ಸಂಸದ ಸಂಜಯ್ ರಾವತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿದರು. ಭಾರತೀಯ ರಾಜಕೀಯದಲ್ಲಿ ಇಂತಹ ಸುಗಮ ಅಧಿಕಾರ ವರ್ಗಾವಣೆ ತೀರಾ ಅಪರೂಪ ಎಂದು ಹೇಳಿದ್ದಾರೆ.
ಕರ್ನಾಟಕದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರದ್ದು ಮಹಾರಾಷ್ಟ್ರದ ವಸಂತದಾದಾ ಪಾಟೀಲ್ ಮತ್ತು ವಸಂತರಾವ್ ನಾಯಕ್ ಅವರಂತಹ ನಾಯಕತ್ವ. ಹಿರಿಯ ನಾಯಕರು ಸಾಮಾನ್ಯವಾಗಿ ತಮ್ಮ ಹುದ್ದೆಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಆದೇಶ ಪಾಲಿಸಿ ರಾಜೀನಾಮೆ ನೀಡಿದ್ದಾರೆ. ಭಾರತೀಯ ರಾಜಕೀಯದಲ್ಲಿ ನಾನು ಇದನ್ನು ನೋಡಿದ್ದು ಅಪರೂಪ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ರಾಜಕಾರಣಿಗಳು ಸಾಮಾನ್ಯವಾಗಿ ತಮ್ಮ ಅಧಿಕಾರ ಮತ್ತು ಸ್ಥಾನಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಾರೆ. ಆದರೆ ಸಿದ್ದರಾಮಯ್ಯ ನಡೆಸಿದ ಸುಗಮ ಅಧಿಕಾರ ಹಸ್ತಾಂತರ ಅತ್ಯಂತ ಅಪರೂಪ. ಯಾವುದೇ ಹಠ ಹಿಡಿಯದೇ ಮುಖ್ಯಮಂತ್ರಿಯಂತಹ ಸ್ಥಾನದಿಂದ ಕೆಳಗಿಳಿಯುವ ಮೂಲಕ ಅಪರೂಪದ ಮಾದರಿ ಹಾಕಿ ಕೊಟ್ಟಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧತೆ ತೋರಿದ್ದಾರೆ. ಇದು ರಾಜಕೀಯ ಪ್ರೌಢಿಮೆಯ ಸಂಕೇತ. ಸಿದ್ದರಾಮಯ್ಯನವರ ಬಗ್ಗೆ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಸಂಜಯ್ ರಾವತ್ ಶ್ಲಾಘಿಸಿದ್ದಾರೆ.