ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರವಾಗ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದ್ಯ ಮುಂದಿನ ಮುಖ್ಯಮಂತ್ರಿ ಆಯ್ಕೆ ಕುರಿತು ಎಲ್ಲತ ಚಿತ್ತ ನೆಟ್ಟಿದೆ.
ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬುದನ್ನು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದು, ಹಲವು ಶಾಸಕರ ಬಾಯಲ್ಲೂ ಆ ಹೆಸರು ಕೇಳಿಬಂದಿದೆ. ಇನ್ನು ಇಂದು ( ಮೇ 30 ) ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಡಿಕೆಶಿ ಹೆಸರು ಈ ಸಭೆಯಲ್ಲಿ ಫೈನಲ್ ಆಗಲಿದೆ ಎನ್ನಲಾಗಿದೆ.
ಇನ್ನು ಡಿಕೆ ಶಿವಕುಮಾರ್ ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದ್ದು, ಇದರ ಕುರಿತು ಸಹ ಶಾಸಕಾಂಗ ಸಭೆ ನಡೆದ ಬಳಿಕ ಮಾಹಿತಿ ಹೊರಬೀಳಲಿದೆ.
ಈ ನಡುವೆ ಕೆಲ ಶಾಸಕರು ಮುಕ್ತವಾಗಿ ತಾವೂ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆಗಳನ್ನು ಕೊಡುತ್ತಿದ್ದು, 2023ರು ಚುನಾವಣೆಗೂ ಮುನ್ನ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ಗೆ ಬಂದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸಹ ಈ ಸಾಲಿಗೆ ಸೇರಿದ್ದಾರೆ.
ಈ ಕುರಿತು ಇಂದು ಬೆಂಗಳೂರಿನಲ್ಲಿ ಮಾತನಾಡಿರವ ಅವರು ‘ಡಿಕೆ ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ, ಸಿದ್ದರಾಮಯ್ಯ ಸಾಹೇಬ್ರೇ ಹೇಳಿಲ್ವೇ’ ಎಂದಿದ್ದಾರೆ. ಇನ್ನು ಮೂರನೇ ತಾರೀಖು ರಾಜಭವನದಲ್ಲಿ ಡಿಕೆಶಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದ ಅವರು ತಾನೂ ಸಹ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದೇನೆ ಎಂದು ಮುಕ್ತವಾಗಿ ಹೇಳಿದರು. ಅಲ್ಲದೇ ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಎಂದರು.
ಬಳಿಕ ಈ ನಿಮಗೆ ಸಚಿವರಾಗುವ ನಿರೀಕ್ಷೆ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಮುಂದೆ ಚುನಾವಣೆ ಬರುತ್ತಾ ಇದೆ, ಸಂಘಟಿತರಾಗಬೇಕು, ಹಾಸನ ಜಿಲ್ಲೆಗೆ ಇರುವವನು ಒಬ್ಬನೇ ಎಂಎಲ್ಎ. ಆದ್ದರಿಂದ ಕೊಡಲೇಬೇಕಲ್ಲ. ರಾಜಕೀಯ ಲೆಕ್ಕದಲ್ಲೂ ಕೊಡಲೇಬೇಕು’ ಎಂದರು.
ಇನ್ನು ಈ ಹಿಂದೆ ಏನಾದರೂ ಸಿದ್ದರಾಮಯ್ಯನವರೇನಾದರೂ ಮಾತು ಕೊಟ್ಟಿದ್ರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಿವಲಿಂಗೇಗೌಡ ‘ಸಿದ್ದರಾಮಯ್ಯ, ಡಿಕೆಶಿ ಹಾಗೂ ಸುರ್ಜೇವಾಲ ಈ ಮೂವರೂ ಸಹ ಮಾತು ಕೊಟ್ಟೇ ನನ್ನನ್ನು ಕರೆದುಕೊಂಡು ಬಂದಿದ್ರು, ಕಳೆದ ಬಾರಿ ಏನೋ ಮಿಸ್ ಆಯ್ತಪ್ಪ, ಈ ಬಾರಿ ಕೊಡ್ತೀವಿ ಎಂದು ಹೇಳಿದ್ದಾರೆ. ಕೊಡುತ್ತಾರೆ ಎಂದು ಭಾವಿಸುತ್ತೇನೆ’ ಎಂದು ಹೇಳಿಕೊಂಡರು.