ಬೆಂಗಳೂರು: ಅಧಿಕಾರದ ಎರಡು ವರ್ಷಗಳಲ್ಲಿ ರಾಜ್ಯದ ಜನರಿಗೆ ಒಳಿತು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿನ್ನೆ ( ಜೂನ್ 3 ) ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರದ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಇಂದು ಸಂಜೆ 4.05 ಕ್ಕೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ಶುಭಸಂದರ್ಭಕ್ಕೆ ಎಲ್ಲ ಗಣ್ಯರು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ. “ಹಿಂದಿನ ಹೆಜ್ಜೆಯನ್ನು ಮರೆತವನು, ಮುಂದಿನ ಹೆಜ್ಜೆಯನ್ನು ಇಡಲಾರ” ಎಂಬ ಮಾತಿನಲ್ಲಿ ನಂಬಿಕೆಯಿರಿಸಿದ್ದೇನೆ. ಇಂದು ಹೊಸ ದಿನದಂದು ಹೊಸ ಅವಕಾಶಗಳಿಗೆ ದಾರಿಮಾಡಿಕೊಡಲು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಜನತೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ರಾಜ್ಯದ ರೈತಬಳಗ ನಮ್ಮ ಬೆನ್ನುಲುಬು. ಮುಂದಿನ ದಿನಗಳಲ್ಲಿ ರೈತರೂ ಸೇರಿದಂತೆ ವಿವಿಧ ವರ್ಗದ ಜನರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು , ಕಳೆದ ಆರು ತಿಂಗಳಿನಿಂದ ನನ್ನ ಸಿದ್ಧತೆ ನಡೆದಿದೆ. ಈ ದಿಸೆಯಲ್ಲಿ ಹೊಸ ಯುವ ಯುಗ ಸೃಷ್ಠಿಸುವ ಉದ್ದೇಶದಿಂದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.
ನನ್ನ ಮೇಲಿನ ಜನರಿಗೆ ಅಪಾರ ವಿಶ್ವಾಸವಿದೆ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ವೆ ಎಂಬುದರಲ್ಲಿ ವಿಶ್ವಾಸವಿರಿಸಿದ್ದೇನೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ ರಾಜಕೀಯ ಅನುಭವ ನೆರವಾಗಲಿದೆ. 1985ರಿಂದ ವಿಧಾನಸಭೇ ಚುನಾವಣೆಯಲ್ಲಿ ಸ್ಪರ್ಧಿಸಿ, ನಂತರ ಜಿಲ್ಲಾಪಂಚಾಯತ್, ಶಾಸಕರಾಗಿ, ವಿವಿಧ ಸಚಿವ ಸಂಪುಟದ ಭಾಗವಾಗಿ ಸೇವೆ ಸಲ್ಲಿಸಿದ್ದೇನೆ. ಸಣ್ಣ ವಯಸ್ಸಿನಲ್ಲಿ ಅಧಿಕಾರ ಕಂಡರೂ, ಬದುಕಿನ ಹಲವು ಏಳುಬೀಳುಗಳನ್ನು ಕಂಡಿದ್ದೇನೆ. ರಾಜಕೀಯ ತಂತ್ರಗಳ ಕಾರಣ ತಿಹಾರ್ ಜೈಲಿಗೆ ಹೋದರೂ, ನನ್ನ ಆತ್ಮವಿಶ್ವಾಸ ತಗ್ಗಲಿಲ್ಲ. ಇದೇ ಆತ್ಮವಿಶ್ವಾಸದಿಂದ ಜನರ ಸೇವೆಗೆ ಸಿದ್ಧವಾಗಿ ನಿಂತಿದ್ದೇನೆ ಎಂದರು.