ನಿನ್ನೆ ( ಜೂನ್ 3 ) ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಲೋಕಭವನದಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಆರಂಭಿಸಿದರು.
ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ ಹಲವು ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎದುರು ನೋಡುತ್ತಾ ಕಾಂಗ್ರೆಸ್ ಎಂದಿಗೂ ತನ್ನ ಕೈಬಿಡುವುದಿಲ್ಲ ಎಂದು ಪಕ್ಷ ನಿಷ್ಠೆ ತೋರಿಸಿದ್ದ ಡಿಕೆಶಿಗೆ ಕೊನೆಗೂ ಸಿಎಂ ಕುರ್ಚಿಯಲ್ಲಿ ಕುಳಿತು ಆಡಳಿತ ನಡೆಸುವ ಕಾಲ ಬಂದಿದ್ದು, ಅವರ ಅಭಿಮಾನಿಗಳ ಪಾಲಿಗಿದು ಮರೆಯದ ದಿನವಾಗಿದೆ.
ಹೀಗೆ ಬಹು ವರ್ಷಗಳ ಆಸೆಯಂತೆ ಮುಖ್ಯಮಂತ್ರಿ ಗಾದಿಗೆ ಏರಿದ ಡಿಕೆ ಶಿವಕುಮಾರ್ ಮೊದಲ ದಿನವೇ ವಿದ್ಯಾರ್ಥಿಗಳ ವಿಚಾರವಾಗಿ ಮಹತ್ವದ ಘೋಷಣೆ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ದೇಶದಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಎಂಬ ಘೋಷಣೆ ಮಾಡಿ ಹಲವು ರಾಜ್ಯಗಳಿಗೆ ಮಾದರಿಯಾಗಿದ್ದ ರಾಜ್ಯ ಕಾಂಗ್ರೆಸ್ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದು, ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ‘ವಿದ್ಯಾರ್ಥಿ ಯುವಕರು ಅನೇಕ ಬಾರಿ ನನ್ನ ಬಳಿ ಬಸ್ ಪಾಸ್ ಬಗ್ಗೆ ಮಾತನಾಡಿದ್ದಾರೆ, ಹೆಣ್ಣುಮಕ್ಕಳಿಗೆ ಮಾತ್ರ ಫ್ರಿ ಆಗಿ ಓಡಾಡೋಕೆ ಬಿಟ್ಟಿದ್ದೀರ ನಾವೆಲ್ಲ ಏನಾಗಬೇಕು ಎಂದು ಹೇಳಿ ಗಲಾಟೆ ಮಾಡುತ್ತಿದ್ದರು. ಅದಕ್ಕೆ ನಾವು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ತೀರ್ಮಾನಿಸಿದ್ದೇವೆ. ಅದಕ್ಕೆ ಹೊಸ ಹೆಸರನ್ನು ಇಟ್ಟಿದ್ದು, ಉದ್ಘಾಟನೆ ದಿನ ಅದನ್ನು ಬಹಿರಂಗಪಡಿಸುತ್ತೇನೆ. ಶಾಲೆ, ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೂ ಸಹ ಬಸ್ ಪಾಸ್ ಉಚಿತ ಮಾಡಲಿದ್ದೇವೆ. ಅದಕ್ಕೆ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು’ ಎಂದು ಹೇಳಿಕೆ ನೀಡಿದರು.
ಈ ಮೂಲಕ ಎಲ್ಲ ವಿದ್ಯಾರ್ಥಿಗಳಿಗೂ ಬಸ್ ಪಾಸ್ ಉಚಿತ ಎಂದು ಡಿಕೆಶಿ ತಿಳಿಸಿದ್ದಾರೆ, ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೂ ಈ ಯೋಜನೆ ಇರಲಿದೆ.