ಬೆಂಗಳೂರು: ಸಾಕಷ್ಟು ಅಳೆದು ತೂಗಿ ತಮ್ಮ ಸಂಪುಟಕ್ಕೆ 13 ಮಂದಿ ಸಚಿವರನ್ನು ಸೇರ್ಪಡೆ ಮಾಡಿಕೊಂಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಖಾತೆ ಹಂಚಿಕೆ ಸವಾಲಾಗಿ ಪರಿಣಮಿಸಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಪ್ರಬಲ ಖಾತೆಗಳನ್ನು ನಿರ್ವಹಣೆ ಮಾಡಿದ್ದ ಸಚಿವರು ತಮಗೆ ಅದೇ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನು ಕೆಲವರು ಪ್ರಬಲವಾದ ಹಾಗೂ ಸಂಪತ್ಭರಿತವಾದ ಇಲಾಖೆಯನ್ನು ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಈ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದ ಡಿಕೆಶಿ ಅವರು ಎಲ್ಲವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಅದರಂತೆ ನಡೆದುಕೊಳ್ಳಬೇಕೆಂದು ತಮ್ಮ ಸಹೋದ್ಯೋಗಿಗಳಿಗೆ ಭೌತಿಕ ಸೂಚನೆ ನೀಡಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ 2028 ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಿಹಿತನದ ಆಧಾರದ ಮೇಲೆ ಸಚಿವರಿಗೆ ಖಾತೆಗಳನ್ನು ನೀಡಲು ಸಿಎಂ ಒಲವು ತೋರಿದ್ದಾರೆ.
ಹೊಸ ಸಚಿವರ ಸೇರ್ಪಡೆಯು ಒಂದು ಹಂತದ ಪ್ರಕ್ರಿಯೆಯಾಗಿದ್ದರೆ, ಅವರಿಗೆ ಜವಾಬ್ದಾರಿಯುತವಾದ ಖಾತೆಗಳನ್ನು ಹಂಚಿಕೆ ಮಾಡುವುದು ಸರ್ಕಾರದ ಪಾಲಿಗೆ ಸವಾಲಾಗಿ ಪರಿಣಮಿಸಿದೆ.
ಹಿರಿಯ ಹಾಗೂ ಕಿರಿಯರ ನಡುವಿನ ಸಮತೋಲನ: ಅನುಭವಿ ನಾಯಕರಿಗೆ ಪ್ರಮುಖ ಖಾತೆಗಳನ್ನು ನೀಡಬೇಕೋ ಅಥವಾ ಯುವ ನಾಯಕರಿಗೆ ಆದ್ಯತೆ ನೀಡಬೇಕೋ ಎಂಬ ಗೊಂದಲ ನಾಯಕತ್ವವನ್ನು ಕಾಡುತ್ತಿದೆ
ಗೃಹ, ಹಣಕಾಸು, ಲೋಕೋಪಯೋಗಿ ಮತ್ತು ನೀರಾವರಿಯಂತಹ ಪ್ರಮುಖ ಖಾತೆಗಳನ್ನು ಪಡೆಯಲು ಸಚಿವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರೀಕ್ಷಿತ ಖಾತೆಗಳು ಸಿಗದಿದ್ದರೆ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯಿದ್ದು, ಇದನ್ನು ಶಮನಗೊಳಿಸಲು ಪಕ್ಷದ ವರಿಷ್ಠರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರದ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಿವೆ. ಹೀಗಾಗಿ, ಆಡಳಿತದಲ್ಲಿ ಯಾವುದೇ ವ್ಯತ್ಯಯವಾಗದಂತೆ ಖಾತೆಗಳನ್ನು ಹಂಚಿಕೆ ಮಾಡುವುದು ಅನಿವಾರ್ಯವಾಗಿದೆ.
ಖಾತೆ ಹಂಚಿಕೆಯ ಕಗ್ಗಂಟನ್ನು ಬಿಡಿಸಲು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳ ಮಟ್ಟದಲ್ಲಿ ನಿರಂತರ ಸಭೆಗಳು ನಡೆಯುತ್ತಿವೆ. ಸಚಿವರಿಗೆ ಅವರ ಸಾಮರ್ಥ್ಯ ಮತ್ತು ಅನುಭವದ ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಿ, ಸರ್ಕಾರವನ್ನು ಸುಗಮವಾಗಿ ನಡೆಸಿಕೊಂಡು ಹೋಗುವುದು ಈಗಿರುವ ಪ್ರಮುಖ ಗುರಿಯಾಗಿದೆ.
ಸಂಪುಟದಲ್ಲಿರುವ ಹಿರಿಯ ಸಚಿವರು ಪ್ರಭಾವಿ ಖಾತೆಗಳಿಗಾಗಿ ಬೇಡಿಕೆ ಇಡುತ್ತಿರುವುದು ಮತ್ತು ಕೆಲವು ಸಚಿವರು ತಮ್ಮ ಬಳಿ ಇರುವ ಖಾತೆ ಬದಲಾವಣೆಗೆ ಒಪ್ಪುತ್ತಿಲ್ಲದಿರುವುದು ಪ್ರಮುಖ ಕಾರಣ.
ವಿವಿಧ ಪ್ರದೇಶಗಳು, ಜಾತಿ ಸಮುದಾಯಗಳು ಮತ್ತು ಹೊಸಬರು ಹಾಗೂ ಹಿರಿಯರ ನಡುವೆ ಅಧಿಕಾರದ ಸಮತೋಲನ ಕಾಯ್ದುಕೊಳ್ಳುವುದು ಹೈಕಮಾಂಡ್ ಮತ್ತು ಡಿಕೆ ಶಿವಕುಮಾರ್ ಅವರಿಗೆ ದೊಡ್ಡ ತಲೆನೋವಾಗಿದೆ.
ಯುಟಿ ಖಾದರ್ ಹೊರತುಪಡಿಸಿದರೆ ಉಳಿದ 13 ಮಂದಿ ಸಚಿವರು ಸಿದ್ದರಾಮಯ್ಯ ಅವಧಿಯಲ್ಲಿ ಪ್ರಬಲವಾದ ಖಾತೆಗಳನ್ನು ನಿರ್ವಹಣೆ ಮಾಡಿದ್ದರು ಇದರಲ್ಲಿ ಕೆಲವರಿಗೆ ಬೇರೊಂದು ಖಾತೆಗಳನ್ನು ನೀಡುವ ಬಗ್ಗೆ ಪಕ್ಷದ ಮುಖಂಡರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ.
ಉಪಮುಖ್ಯಮಂತ್ರಿ, ಡಾ. ಜಿ ಪರಮೇಶ್ವರ್ ಸಚಿವರಾದ ಎಂಬಿ ಪಾಟೀಲ್ ಬೈರತಿ ಸುರೇಶ್ ಸೇರಿದಂತೆ ಈ ಹಿಂದೆ ಸಚಿವರಾಗಿ ನಿರ್ವಹಿಸಿದ್ದ ಖಾತೆಗಳು ಬದಲಾಗಲಿ ಎಂಬ ವದಂತಿ ಹಬ್ಬಿದೆ.
ಮೂಲಗಳ ಪ್ರಕಾರ ಯಾವುದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಸಿಎಂ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡುವ ಸಾಧ್ಯತೆ ಇದೆ.
ಗೃಹ ಸಚಿವರಾಗಿ ತಕ್ಕಮಟ್ಟಿಗೆ ಯಶಸ್ವಿಯಾಗಿ ಖಾತೆಯನ್ನು ನಿಭಾಯಿಸಿರುವ ಡಾ. ಜಿ ಪರಮೇಶ್ವರ್ ಅವರು ತಮಗೆ ಗೃಹ ಖಾತೆ ಬದಲು ಕಂದಾಯ ಖಾತೆ ನೀಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಆದರೆ ಈ ಹಿಂದೆ ಸಿದ್ದರಾಮಯ್ಯ ಸಂಪೂರ್ಣದಲ್ಲಿ ಕಂದಾಯ ಸಚಿವರಾಗಿ ಜನಾನುರಾಗಿ ಸಚಿವರು ಎಂದೇ ಖ್ಯಾತಿಯಾಗಿದ್ದ ಕೃಷ್ಣ ಬೈರೇಗೌಡ ಅವರು ತಮಗೆ ಅದೇ ಖಾತೆಯನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾದ ನಂತರ ಇಲಾಖೆಯಲ್ಲಿ ಹಲವು ಸುಧಾರಣೆಗಳಿಗೆ ಮುನ್ನುಡಿ ಬರೆದಿದ್ದರು ಹೀಗಾಗಿ ಅವರನ್ನೇ ಮುಂದುವರಿಸಬೇಕೇ ಇಲ್ಲವೇ ಹಿರಿಯ ಮುಖಂಡ ಪರಮೇಶ್ವರ್ ಅವರಿಗೆ ಈ ಖಾತೆಯನ್ನು ನೀಡಬೇಕೆಂಬುದರ ಬಗ್ಗೆ ಸಿಎಂ ಅವರಿಗೆ ಜಿಜ್ಞಾಸೆ ಎದುರಾಗಿದೆ.
ರಾಜ್ಯದ ಅತ್ಯಂತ ಪ್ರಭಾವಿ ಖಾತೆ ಎಂದು ಹೇಳಲಾಗುತ್ತಿರುವ ಗೃಹ ಖಾತೆಯನ್ನು ಕಾಂಗ್ರೆಸ್ ಯುವ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ನೀಡಬೇಕು ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಪ್ರತಿಪಕ್ಷಗಳ ಆರೋಪ ಹಾಗೂ ಬಲಪಂಥೀಯ ಸಂಘಟನೆಗಳ ಆಟಟೋಪಕ್ಕೆ ಕಡಿವಾಣ ಹಾಕಲು ಖರ್ಗೆ ಅವರೇ ಗೃಹ ಖಾತೆಗೆ ಸರಿಯಾದ ವ್ಯಕ್ತಿ ಎಂಬುದು ಅನೇಕರ ಭಾವನೆಯಲ್ಲಿದೆ.
ಆದರೆ ರಾಜಕೀಯವಾಗಿ ಅಷ್ಟೊಂದು ಅನುಭವವಿಲ್ಲದ ಪ್ರಿಯಾಂಕ ಖರ್ಗೆ ಅವರಿಗೆ ಈ ಖಾತೆಯನ್ನು ನೀಡಿದರೆ ನಿಭಾಯಿಸುವರೆ? ಎಂಬ ಯಕ್ಷಪ್ರಶ್ನೆಯು ಇದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ರಾಮಲಿಂಗ ರೆಡ್ಡಿ ಅವರು ತಮಗೆ ಬೆಂಗಳೂರು ಉಸ್ತುವಾರಿ ಜೊತೆಗೆ ಬೃಹತ್ ನಿರಾವರಿ ಖಾತೆಯನ್ನು ಕೇಳಿಕೊಂಡಿದ್ದಾರೆ.
ಮುಂಬರುವ ಜಿ ಬಿಎ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಗಳೂರು ಉಸ್ತುವಾರಿ ರಾಮಲಿಂಗರೆಡ್ಡಿ ಹೆಗಲಿಗೆ ನೀಡಬಹುದು. ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದರಿಂದ ಅವರ ಬಳಿ ಹೆಚ್ಚುವರಿ ಖಾತೆಗಳು ಇರುವ ಕಾರಣ ಬೆಂಗಳೂರು ಉಸ್ತುವಾರಿಯನ್ನು ರಾಮಲಿಂಗ ರೆಡ್ಡಿ ಅವರಿಗೆ ನೀಡುವ ಸಾಧ್ಯತೆ ಇದೆ.
ನಗರ ಅಭಿವೃದ್ಧಿ ಸಚಿವರಾಗಿದ್ದ ಭೈರತಿ ಸುರೇಶ್ ಅವರಿಗೆ ಸಾರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹೊಣೆಗಾರಿಕೆಯು ಸಿಗಬಹುದು.
ಒಂದು ವೇಳೆ ಪ್ರಿಯಾಂಕ ಖರ್ಗೆ ಗೃಹ ಸಚಿವರಾದರೆ ಅವರಿಗೆ ಹೆಚ್ಚುವರಿಯಾಗಿ ಐಟಿಬಿಟಿ ಖಾತೆ ಸಿಗಲಿದೆ. ಇನ್ನು ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಣೆಗಾರಿಕೆ ಸಿಗಬಹುದು.
ವಿಧಾನಸಭೆಯ ಸ್ಪೀಕರ್ ಆಗಿದ್ದ ಯುಟಿ ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊಣೆಗಾರಿಕೆಯನ್ನು ಸಿಎಂ ನೀಡಬಹುದು.
ಎಂಬಿ ಪಾಟೀಲ್ , ಕೆಜೆ ಜಾರ್ಜ್ , ಸತೀಶ್ ಜಾರಕಿಹೊಳಿ, ಡಾಮ ಶರಣ್ ಪ್ರಕಾಶ್ ಪಾಟೀಲ್ ಹಾಗೂ ಕೆ.ಹೆಚ್ ಮುನಿಯಪ್ಪ ಅವರಿಗೆ ಹಳೆ ಖಾತೆಗಳೇ ಸಿಗುವ ಸಂಭವ ಇದೆ.
ಈ ಸಂಪುಟ ವಿಸ್ತರಣೆಯು ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಿದೆಯೇ ಅಥವಾ ಖಾತೆ ಹಂಚಿಕೆಯ ವಿವಾದವು ಆಡಳಿತಕ್ಕೆ ತಡೆ ಒಡ್ಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.