ಬೆಂಗಳೂರು: ಇಂದು ನಮ್ಮ ರಾಜ್ಯಕ್ಕೆ ಸೋಷಿಯಲ್ ಮೀಡಿಯಾಗೆ ಇನ್ ಚಾರ್ಜ್ ಮಂತ್ರಿಗಳು ಸಿಕ್ಕಿದ್ದಾರೆ. ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಪ್ರಿಯಾಂಕ್ ಖರ್ಗೆ ಅವರು ಬೆಳೆಗ್ಗೆ ಎದ್ದ ತಕ್ಷಣ ತಮ್ಮ ಲ್ಯಾಪ್ ಟಾಪ್ ಓಪನ್ ಮಾಡಿಕೊಂಡು ಯಾರ್ಯಾರು ತನ್ನ ವಿರುದ್ಧ ಮಾತನಾಡಿದ್ದಾರೆ, ಯಾರು ತನ್ನ ವಿರುದ್ಧ ಕಮೆಂಟ್ ಮಾಡಿದ್ದಾರೆ ಅವರ ಲಿಸ್ಟ್ ಮಾಡಿಕೊಂಡು ಅವರು ಎಲ್ಲಿದ್ದಾರೆ ಎಂದು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸೋಷಿಯಲ್ ಮೀಡಿಯಾ ಮಂತ್ರಿಯಾಗಿರುವ ಗೃಹ ಸಚಿವ ಪ್ರಿಯಂಕ್ ಖರ್ಗೆ ಅವರು ಬೆಳಿಗ್ಗೆ ಎದ್ದಾಕ್ಷಣ ಆರ್.ಎಸ್.ಎಸ್ ನ್ನು ಟೀಕಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವವರನ್ನು ಪೊಲೀಸರನ್ನು ಕಳುಹಿಸಿ ಅರೆಸ್ಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಕಮೆಂಟ್ ಮಾಡುವವರನ್ನು ಅರೆಸ್ಟ್ ಮಾಡಿಸುವುದೇ ನಿಮ್ಮ ಕೆಲಸಾನಾ? ಎಂದು ಪ್ರಶ್ನಿಸಿದ್ದಾರೆ.
ಖರ್ಗೆ ಬಗ್ಗೆ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬನನ್ನು ದಕ್ಷಿಣ ಕನ್ನಡದಲ್ಲಿ ಬಂಧಿಸುವ ಕೆಲಸವನ್ನು ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಪ್ರಿಯಾಂಕ್ ಖರ್ಗೆ ಅವರಿಗೆ ಯೋಗ್ಯತೆ, ಅರ್ಹತೆಯನ್ನು ಮೀರಿ ಗೃಹ ಸಚಿವರ ಹುದ್ದೆ ನೀಡಲಾಗಿದೆ. ಅರ್ಹತೆ, ವಯಸ್ಸು ಮೀರಿ ಗೃಹ ಮಂತ್ರಿಯಂತಹ ಸ್ಥಾನ ಸಿಕ್ಕಿದಾಗ ಅದನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಬಿಟ್ಟು ಯಾರ್ಯಾರು ಏನೇನು ಮಾಡುತ್ತಾರೆ ಎಂದು ನೋಡುತ್ತಾ ಅವರಿಗೆ ಹೇಗೆಲ್ಲ ತೊಂದರೆ ಕೊಡಬೇಕು ಹಾಗೆಲ್ಲ ತೊಂದರೆ ಕೊಡುವ ಕೆಲ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗೃಹಮಂತ್ರಿಗಳಾದ ಮೇಲೆ ಪ್ರಿಯಾಂಕ್ ಖರ್ಗೆ ಯಾವುದರ ಬಗ್ಗೆ ಗಮನ ಹರಿಸಬೇಕಿತ್ತು? ಮೈಸೂರಿನಲ್ಲಿನ ಡ್ರಗ್ಸ್ ಫ್ಯಾಕ್ಟರಿ ಬಗ್ಗೆ ಗಮನಹರಿಸಬೇಕಿತ್ತು. ಅದರ ಬಗ್ಗೆ ಗಮನ ಹರಿಸುವುದು ಇವರಿಗೆ ಬೇಕಿಲ್ಲ. ಕಾರಣ ಪ್ರಿಯಾಂಕ್ ಖರ್ಗೆ ಉದ್ದೇಶನೇ ಬೇರೆ. ಕರ್ನಾಟಕದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಅದರ ಬಗ್ಗೆ ಗಮನಹರಿಸಬೇಕಿತ್ತು. ಅಧಿಕಾರಿಗಳ ಸಭೆ ಕರೆದು ಮಾಹಿತಿಪಡೆಯಬೇಕಾಗಿತ್ತು. ವಿಜಯಪುರದಲ್ಲಿ ಬ್ಯಾಂಕ್ ದರೋಡೆಯಾಯಿತು. ಅದರ ಬಗ್ಗೆಯೂ ಮಾತನಾಡಿಲ್ಲ. ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚುತ್ತಿದೆ. ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿತ್ತು. ಅದನ್ನೂ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಅವರೇ ಮೊದಲು ಸೋಷಿಯಲ್ ಮೀಡಿಯಾ ಮಾಂತ್ರಿ ಕೆಲಸ ಬಿಟ್ಟು ಈ ರಾಜ್ಯದ ಗೃಹ ಮಂತ್ರಿಯಾಗಿ ಜವಾಬ್ದಾರಿಯುತವಾಗಿ ವರ್ತಿಸಿ ಎಂದು ಆಗ್ರಹಿಸಿದ್ದಾರೆ.