ದೆಹಲಿ: ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಸಭೆಗೂ ಮುನ್ನವೇ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಭಾರಿ ರಾಜೀನಾಮೆ ಪರ್ವ ಶುರುವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೊಡ್ಡ ಆಘಾತ ಎದುರಾಗಿದೆ. ಪಕ್ಷ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪಕ್ಷದ ಹಿರಿಯ ನಾಯಕರೇ ಶಾಕ್ ನೀಡುತ್ತಿದ್ದು, ಬಂಡಾಯದ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ.
ರಾಜ್ಯಸಭೆಯಲ್ಲಿ ಟಿಎಂಸಿಯ ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದ ಹಿರಿಯ ಸಂಸದ ಸುಖೇಂದು ಶೇಖರ್ ರಾಯ್ ಹಾಗೂ ನಟಿ ಮತ್ತು ಸಂಸದೆ ಕೋಯಲ್ ಮಲ್ಲಿಕ್ (ರುಕ್ಮಿಣಿ ಮಲ್ಲಿಕ್) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಸದ್ಯ ಸಂಸತ್ ಮೇಲ್ಮನೆಯಲ್ಲಿ 13 ಸದಸ್ಯರನ್ನು ಹೊಂದಿರುವ ಟಿಎಂಸಿ ಬಲ, ಈ ಇಬ್ಬರ ರಾಜೀನಾಮೆಯಿಂದಾಗಿ 11ಕ್ಕೆ ಇಳಿಯಲಿದೆ. ಸುಖೇಂದು ರಾಯ್ ಅವರ ಅವಧಿ 2029 ರ ಆಗಸ್ಟ್ ವರೆಗೆ ಹಾಗೂ ಮಲ್ಲಿಕ್ ಅವರ ಅವಧಿ 2032 ರ ಏಪ್ರಿಲ್ ವರೆಗೆ ಇತ್ತು.
ಟಿಎಂಸಿ ಸರ್ಕಾರವನ್ನು ತಿರಸ್ಕರಿಸಿದ ಬಂಗಾಳದ ಜನ: ಸುಖೇಂದು ರಾಜೀನಾಮೆ ಪತ್ರದಲ್ಲೇನಿದೆ?
ಸುಖೇಂದು ಶೇಖರ್ ರಾಯ್ ಅವರು ರಾಜ್ಯಸಭಾ ಸಭಾಪತಿಗೆ ಇಂದು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅದರಲ್ಲಿ ಮಮತಾ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ʻʻಭ್ರಷ್ಟಾಚಾರ, ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಶಿಕ್ಷಣ, ಆರೋಗ್ಯ ರಕ್ಷಣೆ, ಕೈಗಾರಿಕೆ, ಉದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಆಡಳಿತದಲ್ಲಿನ ವೈಫಲ್ಯಗಳಿಂದಾಗಿ ಬಂಗಾಳದ ಜನ 15 ವರ್ಷ ಆಡಳಿತ ನಡೆಸಿದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆʼʼ ಎಂದು ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ‘ಐತಿಹಾಸಿಕ ಜನಾದೇಶ’ ಎಂದು ಬಣ್ಣಿಸಿರುವ ರಾಯ್, ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯಸಭೆ ಎರಡಕ್ಕೂ ರಾಜೀನಾಮೆ ನೀಡುವ ಮೂಲಕ ಜನರ ತೀರ್ಪನ್ನು ಸ್ವೀಕರಿಸುತ್ತಿರುವುದಾಗಿ ನೇರ ಟಾಂಗ್ ಕೊಟ್ಟಿದ್ದಾರೆ.
ದೀದಿ ಆಪ್ತ ವಲಯದಲ್ಲೂ ಬಿರುಕು: ಕಲ್ಯಾಣ್ ಬ್ಯಾನರ್ಜಿ ವಿರುದ್ಧ ದೂರು
ಮಮತಾ ಬ್ಯಾನರ್ಜಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಕಾಕೋಲಿ ಘೋಷ್ ದಸ್ತಿದಾರ್ ಕೂಡ ಈಗ ಬಂಡಾಯಗಾರರ ಗುಂಪು ಸೇರಿದ್ದು, ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವ ದಸ್ತಿದಾರ್, ತಮ್ಮದೇ ಪಕ್ಷದ ಸಹೋದ್ಯೋಗಿ ಮತ್ತು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮಗೆ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ದೂರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಿಎಂಸಿಯ ಹಲವು ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ಪಕ್ಷದ ಹೈಕಮಾಂಡ್ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಟೀಕಿಸುತ್ತಿದ್ದಾರೆ.
HUGE! TMC Rajya Sabha MPs Koel Mallick and Sukhendu Shekhar Roy will RESIGN today.
(@MeghUpdates)