ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಭಾರತೀಯ ರಾಜಕೀಯ ವಲಯದಲ್ಲಿ ಚುನಾವಣಾ ಚಾಣಕ್ಯ ಮತ್ತು ಮಾಸ್ಟರ್ ಮೈಂಡ್ ಎಂದೇ ಖ್ಯಾತಿ ಪಡೆದಿರುವ ಸುನೀಲ್ ಕನುಗೋಳು ಅವರಿಗೆ ಕರ್ನಾಟಕದ ಸಂಪುಟ ಸಚಿವರ (ಕ್ಯಾಬಿನೆಟ್ ಸಚಿವ) ಸ್ಥಾನಮಾನ ಸಿಕ್ಕಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುನೀಲ್ ಕನುಗೋಳು ಅವರನ್ನು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರನನ್ನಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಿಶೇಷ ಏನಂದ್ರೆ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಸುನೀಲ್ ಕನುಗೋಳು ಅವರೇ ಮುಖ್ಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕವೂ ತಮಗೂ ಅವರನ್ನೇ ಮುಖ್ಯ ಸಲಹೆಗಾರನನ್ನಾಗಿ ನೇಮಿಸಿಕೊಂಡಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಸಂಪುಟ ದರ್ಜೆಯ ಸಕಲ ಸೌಲಭ್ಯಗಳು ಫಿಕ್ಸ್
ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿರುವ ಸುನೀಲ್ ಕನುಗೋಳು ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಲಾಗಿದ್ದು, ಸರ್ಕಾರದ ವತಿಯಿಂದ ಲಭ್ಯವಿರುವ ಎಲ್ಲಾ ಅಧಿಕೃತ ಸೌಲಭ್ಯಗಳನ್ನು ಒದಗಿಸಲು ಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಹಾಗೂ ಸರ್ಕಾರದ ಪರವಾಗಿ ಜನರ ಒಲವು ಮೂಡುವಂತೆ ಮಾಡಲು ಸುನೀಲ್ ಕನುಗೋಳು ನೀಡುವ ಪ್ರಮುಖ ಮಾಸ್ಟರ್ ಪ್ಲಾನ್ ಮತ್ತು ಸಲಹೆಗಳಂತೆಯೇ ಸಿಎಂ ಡಿಕೆಶಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇವರು ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಯಾರು ಈ ಸುನೀಲ್ ಕಣಗೋಳು?
ಸುನೀಲ್ ಕಣಗೋಳು ಭಾರತದ ಅತ್ಯಂತ ಪ್ರಭಾವಿ ಚುನಾವಣಾ ತಂತ್ರಗಾರ ಮತ್ತು ರಾಜಕೀಯ ಸಲಹೆಗಾರರಾಗಿದ್ದಾರೆ. ಮೂಲತಃ ಬಳ್ಳಾರಿಯವರಾದ ಇವರು ಆರಂಭದಲ್ಲಿ ಪ್ರಸಿದ್ಧ McKinsey ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ (I-PAC) ಸಂಸ್ಥೆಯನ್ನು ಸೇರಿಕೊಳ್ಳುವ ಮೂಲಕ ರಾಜಕೀಯ ತಂತ್ರಗಾರಿಕೆಯ ಲೋಕಕ್ಕೆ ಕಾಲಿಟ್ಟರು. ಸದ್ಯ ಇವರು ಬೆಂಗಳೂರು ಮೂಲದ ‘Inclusive Minds’ ಎಂಬ ಕಂಪನಿಯನ್ನು ನಡೆಸುತ್ತಿದ್ದು, ಡೇಟಾ ಆಧಾರಿತ ಚುನಾವಣಾ ತಂತ್ರಗಳನ್ನು ಹೆಣೆಯುವಲ್ಲಿ ಪ್ರವೀಣರಾಗಿದ್ದಾರೆ.
ಮೋದಿ ಪ್ರಧಾನಿ ಅಭಿಯಾನದಿಂದ ಸಿದ್ದರಾಮಯ್ಯ ಗೆಲುವಿನವರೆಗೆ ಇವರದ್ದೇ ಹವಾ
2014ರ ಲೋಕಸಭೆ ಚುನಾವಣೆ: ನರೇಂದ್ರ ಮೋದಿ ಅವರ ಪ್ರಧಾನಿ ಅಭಿಯಾನದ ರಾಜಕೀಯ ತಂತ್ರಗಳ ಹಿಂದೆ ಸುನೀಲ್ ಕಣಗೋಳು ಪ್ರಮುಖ ಪಾತ್ರ ವಹಿಸಿದ್ದರು.
ಕರ್ನಾಟಕ ಕಾಂಗ್ರೆಸ್ ಗೆಲುವು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಇವರೇ ಮುಖ್ಯ ರೂವಾರಿಯಾಗಿದ್ದರು. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಸರ್ಕಾರದಲ್ಲಿ ಇವರಿಗೆ ಕ್ಯಾಬಿನೆಟ್ ದರ್ಜೆಯ ಮುಖ್ಯ ಸಲಹೆಗಾರ ಸ್ಥಾನ ಸಿಕ್ಕಿತ್ತು.
ತೆಲಂಗಾಣದಲ್ಲಿ ಮ್ಯಾಜಿಕ್: 2023ರಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ಇವರ ಚುನಾವಣಾ ತಂತ್ರಗಾರಿಕೆಯೇ ಮುಖ್ಯ ಕಾರಣವಾಗಿತ್ತು.
ಇತರ ರಾಜ್ಯಗಳಲ್ಲೂ ಟಾಸ್ಕ್: ಇತ್ತೀಚೆಗೆ ಕೇರಳದಲ್ಲಿ 2026ರ ಚುನಾವಣೆ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಸಲಹೆಗಳನ್ನು ನೀಡುತ್ತಾ ಮುನ್ನಡೆಯುತ್ತಿದ್ದಾರೆ.