ಬೆಂಗಳೂರು: ಪಡಿತರ ಚೀಟಿದಾರರಿಗೆ ಎರಡು ಬಾರಿ ಬೆರಳಚ್ಚು ನೀಡುವುದರಿಂದ ಆಹಾರ ಇಲಾಖೆ ವಿನಾಯಿತಿ ನೀಡಿದೆ.
ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಪಡಿತರ ಪಡೆಯಲು ಫಲಾನುಭವಿಗಳು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಈ ಕ್ರಮ ಕೈಗೊಂಡಿದೆ. ಆಹಾರ ಇಲಾಖೆ ಎರಡು ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ಪಡಿತರ ಚೀಟಿದಾರರಿಗೆ ನೀಡುತ್ತಿದೆ. ಹೀಗಾಗಿ ಪಡಿತರ ಚೀಟಿದಾರರು ಎರಡು ಬಾರಿ ಬೆರಳಚ್ಚು ನೀಡಬೇಕಿತ್ತು. ಕಳೆದ ಬಾರಿ ಇದೇ ರೀತಿ ಮಾಡಿದ್ದರಿಂದ ಸರ್ವರ್ ಸಮಸ್ಯೆ ಉಂಟಾಗಿ ಫಲಾನುಭವಿಗಳು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ನಿವಾರಿಸಲು ಒಂದೇ ಬಾರಿ ಬೆರಳಚ್ಚು ಪಡೆದುಕೊಂಡು ಅಕ್ಕಿ ನೀಡಲು ಆಹಾರ ಇಲಾಖೆಯಿಂದ ನ್ಯಾಯ ಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಮೇನಲ್ಲಿ ಒಂದೇ ಬಾರಿ ಕಾರ್ಡ್ ದಾರರಿಗೆ ವಿತರಿಸಲಾಗಿತ್ತು. ಕೇಂದ್ರದ ಪಾಲಿನ ಎರಡು ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ವಿತರಿಸಿದ್ದ ಪರಿಣಾಮ ರಾಜ್ಯದ ಪಾಲಿನ ಅಕ್ಕಿಯನ್ನು ಕಾರ್ಡ್ ದಾರರಿಗೆ ವಿತರಣೆ ಮಾಡಿರಲಿಲ್ಲ.
ಮೇ ಮತ್ತು ಜೂನ್ ತಿಂಗಳ ಅಕ್ಕಿಯನ್ನು ಒಂದೇ ಬಾರಿ ಜೂನ್ ನಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಒಂದೇ ಬಾರಿ ಬೆರಳಚ್ಚು ಪಡೆದು ಅಕ್ಕಿ ವಿತರಿಸುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ. ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಪಡಿತರ ಪಡೆದುಕೊಳ್ಳಬಹುದು. ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ನ್ಯಾಯಬೆಲೆ ಅಂಗಡಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.