ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೈ-ವೋಲ್ಟೇಜ್ ಬೆಳವಣಿಗೆಯೊಂದು ನಡೆದಿದ್ದು, ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಖಾತೆ ಕ್ಯಾತೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ ಹೈಕಮಾಂಡ್ ಸೂಚನೆಯಂತೆ ತಮಗೆ ಹಂಚಿಕೆಯಾಗಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಅಧಿಕಾರ ವ್ಯಾಪ್ತಿಯ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಸಚಿವ ಕೃಷ್ಣ ಬೈರೇಗೌಡ (Krishna Byre Gowda), ಹೈಕಮಾಂಡ್ನಿಂದ ಸ್ಪಷ್ಟತೆ ಸಿಗುವವರೆಗೂ ಅಧಿಕಾರ ಸ್ವೀಕಾರ ಮಾಡುವುದಿಲ್ಲ ಎಂದು ಜಿದ್ದಿಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ತಡರಾತ್ರಿಯೇ ಶಾಸಕ ರಿಜ್ವಾನ್ ಅರ್ಷದ್ ಅವರೊಂದಿಗೆ ನವದೆಹಲಿಗೆ ದೌಡಾಯಿಸಿದ್ದಾರೆ
ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮಹತ್ವದ ವಿಭಾಗಗಳೇ ಕೈತಪ್ಪಿರುವುದಕ್ಕೆ ಬೇಸತ್ತಿರುವ ಕೃಷ್ಣ ಬೈರೇಗೌಡ, ಈಗ ನೇರವಾಗಿ ದೆಹಲಿ ಅಂಗಳದಲ್ಲೇ ಸಚಿವ ಸ್ಥಾನದ ವ್ಯಾಪ್ತಿಯ ಹಕ್ಕು ಮಂಡಿಸಲು ಮುಂದಾಗಿದ್ದಾರೆ.
KBG ಅಸಮಾಧಾನಕ್ಕೆ ಅಸಲಿ ಕಾರಣವೇನು?
ಹೈಕಮಾಂಡ್ ಸೂಚನೆಯ ಮೇರೆಗೆ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ಅಭಿವೃದ್ಧಿ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿತ್ತು ನಿಜ. ಆದರೆ, ಈ ಇಲಾಖೆಯ ಅಸಲಿ ಪವರ್ ಹಾಗೂ ಪ್ರಮುಖ ಅಂಗಗಳಾದ:
ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ – BDA)
ಬಿಎಂಆರ್ಡಿಎ (ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ – BMRDA)
ಸೇರಿದಂತೆ ಪ್ರಮುಖ ಹಾಗೂ ಆಯಕಟ್ಟಿನ ವಿಭಾಗಗಳನ್ನು ಕೃಷ್ಣ ಬೈರೇಗೌಡ ಅವರಿಗೆ ವಹಿಸಿಕೊಟ್ಟಿಲ್ಲ ಇಲಾಖೆಯ ಮೇನ್ ವಿಭಾಗಗಳೇ ಕೈತಪ್ಪಿ ಬರೀ ಅರ್ಧ ಖಾತೆ ಸಿಕ್ಕಿರುವುದರಿಂದ ಅಸಮಾಧಾನಗೊಂಡಿರುವ ಅವರು, ಈವರೆಗೆ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನದ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಪೂರ್ಣ ಖಾತೆ ಕೊಡಿ, ಇಲ್ಲ ಕಂದಾಯವೇ ಇರಲಿ
ಖಾತೆ ಹಂಚಿಕೆಯಾದ ಬೆನ್ನಲ್ಲೇ ಸಚಿವ ಕೃಷ್ಣ ಬೈರೇಗೌಡ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಮ್ಮುಖದಲ್ಲಿ ನಡೆದ ಹೈ-ಲೆವೆಲ್ ಮೀಟಿಂಗ್ನಲ್ಲೂ ಕೃಷ್ಣ ಬೈರೇಗೌಡ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು.
ಡಿಕೆಶಿಗೆ ನೀಡಿದಂತೆ ತಮಗೂ ಪೂರ್ಣ ಅಧಿಕಾರವಿರುವ ಖಾತೆ ನೀಡಬೇಕು ಎಂಬುದು ಕೆಬಿಜಿ ವಾದ. “ಕೊಡುವುದಾದ್ರೆ ಬಿಡಿಎ ಒಳಗೊಂಡ ಪೂರ್ಣ ಖಾತೆ ಕೊಡಿ, ಇಲ್ಲವಾದರೆ ನನ್ನ ಹಳೆಯ ಕಂದಾಯ ಇಲಾಖೆಯನ್ನೇ ಮುಂದುವರಿಸಿ” ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿಯಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಭೇಟಿ
ಇಂದೇ ಎಐಸಿಸಿ (AICC) ವರಿಷ್ಠರನ್ನು ಭೇಟಿಯಾಗಲಿರುವ ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಅರ್ಷದ್, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಥವಾ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ತಮಗಾಗಿರುವ ಅನ್ಯಾಯದ ಬಗ್ಗೆ ಮನವಿ ಸಲ್ಲಿಸಲಿದ್ದಾರೆ. ಸಚಿವರ ಈ ದಿಢೀರ್ ದೆಹಲಿ ದೌಡು ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ಆಂತರಿಕ ಬೇಗುದಿಗೆ ಕಾರಣವಾಗಿದ್ದು, ಹೈಕಮಾಂಡ್ ಈ ‘ಖಾತೆ ಕ್ಯಾತೆ’ಯನ್ನು ಹೇಗೆ ತಣ್ಣಗಾಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.