ಬೆಂಗಳೂರು: ರಾಜ್ಯಸಭೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೆಸರನ್ನು ಮೈತ್ರಿ ಪಕ್ಷ ಬಿಜೆಪಿ ಪರಿಗಣಿಸದ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಇಂದು ದೇವೇಗೌಡರು ಪತ್ರಿಕಾಗೋಷ್ಠಿ ಕರೆದಿರುವುದು ಕುತೂಹಲ ಮೂಡಿಸಿದೆ.
ಬೆಳಿಗ್ಗೆ 11:30ಕ್ಕೆ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ರಾಜ್ಯಸಭೆಗೆ ತಮ್ಮನ್ನು ಪರಿಗಣಿಸದಿರುವ ಕುರಿತು ಕೇಳಿ ಬರುತ್ತಿರುವ ವದಂತಿ ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ.
ರಾಜ್ಯಸಭೆಗೆ ದೇವೇಗೌಡರ ಹೆಸರನ್ನು ಪರಿಗಣಿಸದಿರುವ ಬಗ್ಗೆ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಟೀಕಿಸಿ ದೇವೇಗೌಡರ ಬಗ್ಗೆ ಕಾಳಜಿಯ ಮಾತುಗಳನ್ನು ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಸುದ್ದಿಗೋಷ್ಠಿಯಲ್ಲಿ ಎಲ್ಲಾ ವಿಚಾರಗಳಿಗೆ ಉತ್ತರಿಸಿ ಗೊಂದಲಕ್ಕೆ ತೆರೆಯಲಿದ್ದಾರೆ.
ರಾಜ್ಯಸಭೆಗೆ ಸ್ಪರ್ಧಿಸಲು ಜೆಡಿಎಸ್ ಬಳಿ ಸಂಖ್ಯಾಬಲವಿಲ್ಲ. ಮೈತ್ರಿ ಪಕ್ಷ ಬಿಜೆಪಿಗೆ ಒಂದು ಸ್ಥಾನ ಗೆಲ್ಲಲು ಅಗತ್ಯವಿರುವ ಮತಗಳಿವೆ. ಅಂತೆಯೇ ಅವರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ರಾಜ್ಯಸಭೆ ಸದಸ್ಯ ಸ್ಥಾನ ಬಿಟ್ಟು ಕೊಡುವಂತೆ ಮೈತ್ರಿ ಪಕ್ಷ ಬಿಜೆಪಿಯನ್ನು ಜೆಡಿಎಸ್ ಕೇಳಿಲ್ಲ. ಹೀಗಾಗಿ ತಮಗೆ ಅನ್ಯಾಯವಾಗಿಲ್ಲ. ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಬಾಂಧವ್ಯವಿದೆ. ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲವೆಂದು ದೇವೇಗೌಡರು ಸ್ಪಷ್ಟಪಡಿಸುವ ಸಾಧ್ಯತೆ ಇದೆ.