ದಾವಣಗೆರೆ: ಬಸವಾಪಟ್ಟಣ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್ಪಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿದೆ.
ಅಮಾನುಷ ಕೃತ್ಯದ ಕುರಿತು ತನಿಖೆ ನಡೆಸುವಂತೆ ಎಸ್ಪಿಗೆ ಪತ್ರ ಬರೆಯಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ತನಿಖೆ ನಡೆಸಿ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಜೂನ್ 3ರಂದು ರಾತ್ರಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಬಳಿ 41 ವರ್ಷ ವಯಸ್ಸಿನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕ ಸೇರಿ 10 ಜನ ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಂತ್ರಸ್ತೆಯ ನಗ್ನ ಚಿತ್ರಗಳು ಮತ್ತು ವಿಡಿಯೋಗಳನ್ನು ಆರೋಪಿಗಳು ಸೋಮವಾರ ರಾತ್ರಿ ಬೇರೆಯವರ ಮೊಬೈಲ್ ಗೆ ಹರಿಬಿಟ್ಟಿದ್ದು, ಮನೆಯವರಿಗೆ ವಿಷಯ ಗೊತ್ತಾದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಮದ್ಯ ಸೇವಿಸಿದ್ದ ಪತಿ ಜೊತೆ ಜಗಳವಾಡಿದ ಮಹಿಳೆ ಜೂನ್ 3ರ ರಾತ್ರಿ 7:30ರ ವೇಳೆ ಪಕ್ಕದಲ್ಲಿ ಇರುವ ತವರೂರಿಗೆ ನಡೆದುಕೊಂಡು ಹೋಗುವಾಗ ಸಹಾಯದ ನೆಪದಲ್ಲಿ ಮಾತನಾಡಿಸಿದ ಯುವಕರ ಗುಂಪು ತಂಪು ಪಾನೀಯ ಕುಡಿಯಲು ಕೊಟ್ಟಿದೆ. ಅದನ್ನು ಕುಡಿದ ತಕ್ಷಣ ಪ್ರಜ್ಞೆ ತಪ್ಪಿದ ಮಹಿಳೆಯನ್ನು ಜಮೀನೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಜೂನ್ 4ರ ಬೆಳಗಿನ ಜಾವ ಎಚ್ಚರವಾದ ಮಹಿಳೆ ತವರಿಗೆ ಹೋಗಿದ್ದು, ನಂತರ ಸಂಬಂಧಿಕರ ಊರಿಗೆ ತೆರಳಿದ್ದರು. ಮೊಬೈಲ್ ಗಳಲ್ಲಿ ವಿಡಿಯೋ ಹರಿದಾಡಿದ ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.