ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂದು ಒಂದು ಸುವರ್ಣ ಯುಗ ಅಂತ್ಯಗೊಂಡಿದೆ. ತಮಿಳು ಚಿತ್ರರಂಗದ ದಿಕ್ಸೂಚಿ, ಖ್ಯಾತ ಹಿರಿಯ ನಿರ್ದೇಶಕ, ನಿರ್ಮಾಪಕ ಹಾಗೂ ನಟ ಪದ್ಮಶ್ರೀ ಭಾರತಿರಾಜ (84) ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದಾಗಿ ಚೆನ್ನೈನ ನೀಲಂಕರೈನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ತೀವ್ರ ಶ್ವಾಸಕೋಶದ ಸೋಂಕು ಮತ್ತು ವಯೋಸಹಜ ಕಾಯಿಲೆಯಿಂದಾಗಿ ಚೆನ್ನೈನ ಎಂಜಿಎಂ (MGM) ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ (ICU) ದಾಖಲಾಗಿದ್ದ ಅವರು, ನಂತರ ಚೇತರಿಸಿಕೊಂಡು ವೈದ್ಯರ ಸಲಹೆಯಂತೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿತ್ರರಂಗದ ಈ ಭೀಷ್ಮನ ಅಗಲಿಕೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಕಣ್ಣೀರಲ್ಲಿ ಮುಳುಗಿದ್ದು, ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಘಟಾನುಘಟಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.