ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಕೊಟ್ಟಿಯೂರು ದೇವಾಲಯದ್ದೇ ಸುದ್ದಿ. ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದು, ಕರ್ನಾಟಕದ ಹಲವಾರು ಭಕ್ತರು ಈ ದೇವಾಲಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರಯಾಣ ಕೈಗೊಂಡಿದ್ದಾರೆ.
ಇನ್ನು ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ ಕನ್ನಡಿಗರ ಪೈಕಿ ಅನೇಕರು ದೇವಾಲಯದ ವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದ್ದು, ಇಲ್ಲಿ ಭದ್ರತೆ ಇಲ್ಲ, ಸರಿಯಾದ ಸರತಿ ಸಾಲಿಲ್ಲ, ಸಾವಿರ ರೂ ಕೊಟ್ಟು ಟಿಕೆಟ್ ಪಡೆದರೂ ನೂಕಾಟದಲ್ಲೇ ಸಾಗಿ ದರ್ಶನ ಪಡೆಯಬೇಕು, ಇದನ್ನು ಪ್ರಶ್ನೆ ಮಾಡಲು ಹೋದರೆ ಸಿಬ್ಬಂದಿ ದರ್ಪ ತೋರಿಸುತ್ತಾರೆ, ಹೆಣ್ಣು ಮಕ್ಕಳು ಎಂಬುದನ್ನೂ ಸಹ ನೋಡದೇ ದೈಹಿಕ ಹಲ್ಲೆ ಮಾಡಿದ್ದಾರೆ ಎಂದೆಲ್ಲ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸ್ಥಳೀಯರ ಜತೆ ಚೆನ್ನಾಗಿಯೇ ನಡೆದುಕೊಳ್ಳುವ ಸಿಬ್ಬಂದಿ ಕನ್ನಡಿಗರ ಜತೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕನ್ನಡಿಗರು ಹಲವು ವಿಡಿಯೊಗಳಲ್ಲಿ ಆರೋಪ ಮಾಡಿದ್ದಾರೆ. ಇನ್ನು ಅತ್ತ ಕನ್ನಡಿಗರ ಈ ಆರೋಪಗಳಿಗೆ ಕೇರಳದ ಹಲವು ಜನರು ವಿಡಿಯೊಗಳನ್ನು ಮಾಡಿ ಉತ್ತರ ನೀಡಿದ್ದು, ಇಲ್ಲಿ ಯಾರೂ ಭಾಷೆಯನ್ನು ನೋಡಿ ನಡೆದುಕೊಳ್ಳುತ್ತಿಲ್ಲ, ಮೊದಲು ಒಂದೇ ಸಾರಿ ಹಲವಾರು ಮಂದಿ ಆಗಮಿಸುವುದನ್ನು ಬಿಡಿ, ಇದು ಯಾತ್ರಾಸ್ಥಳವಲ್ಲ, ಸ್ಥಳೀಯರು ಆರಾಧಿಸಲು ಇರುವ ಸ್ಥಳ, ಇದರ ಇತಿಹಾಸ ತಿಳಿಯದೇ ಮಾತನಾಡಬೇಡಿ ಎಂದಿದ್ದಾರೆ.
ಇಷ್ಟೇ ಅಲ್ಲದೇ ಇಲ್ಲಿಗೆ ಬರುವ ಕನ್ನಡಿಗರೇ ಇಲ್ಲಿ ಇಷ್ಟರ ಮಟ್ಟಿಗೆ ಜನ ಸೇರಲು ಕಾರಣ ನೀವೇ, ನಿಮ್ಮ ರಾಜ್ಯದಿಂದಲೇ ಹೆಚ್ಚಿನ ಜನ ಹರಿದುಬಂದು ಈ ರೀತಿಯ ಸಮಸ್ಯೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಕನ್ನಡಿಗರು ದೇವಾಲಯದ ವಿರುದ್ಧ ದೂರುತ್ತಿರುವ ವಿಡಿಯೊವನ್ನು ಶೇರ್ ಮಾಡಿ ತಮ್ಮ ಮನೆ ದೇವರ ದೇವಾಲಯಗಳಿಗೆ ಭೇಟಿ ನೀಡದ ಕನ್ನಡಿಗರು ಆನ್ಲೈನ್ನಲ್ಲಿ ವೈರಲ್ ಆದ ದೇವಾಲಯಗಳಿಗೆ ಭೇಟಿ ನೀಡುವ ಶೋಕಿ ಮಾಡುವುದನ್ನು ಬಿಡಬೇಕು ಎಂದು ಬರೆದುಕೊಂಡಿದ್ದಾರೆ.
ಮತ್ತೋರ್ವ ವ್ಯಕ್ತಿ ಕನ್ನಡಿಗರು ದೂರುವ ಮುನ್ನ ಕೇರಳದ ನಿಯಮವನ್ನು ಅನುಸರಿಸುವುದನ್ನು ಕಲಿಯಿರಿ. ಶಿಸ್ತಿನಿಂದ ಸರತಿ ಸಾಲಿನಲ್ಲಿ ನಿಲ್ಲದೇ ತಳ್ಳಾಟ ಮಾಡುತ್ತೀರ, ರಸ್ತೆಗಳಲ್ಲಿ ಅನಗತ್ಯವಾಗಿ ಓವರ್ ಟೇಕ್ ಮಾಡುತ್ತೀರ ಇದನ್ನೆಲ್ಲ ಬಿಟ್ಟು ಸರಿಯಾಗಿ ನಡೆದುಕೊಳ್ಳಿ ಎಂದು ಪಾಠ ಮಾಡಿದ್ದಾರೆ.
(@shivasspeak)