ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದ ತೆಲಂಗಾಣ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಠಾಣೆ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿಯ ಕೊರಂಗ್ರಪಾಡಿಯ ಸುಪ್ರೀತ್ ಕುಮಾರ್(40) ಬಂಧಿತ ಆರೋಪಿ. ಜೂನ್ 9ರಂದು ಸಂಜೆ ತೆಲಂಗಾಣದ ರಂಗರಾವ್ ಕುಟುಂಬದವರು ಕೃಷ್ಣ ಮಠಕ್ಕೆ ಬಂದಿದ್ದು, ಅವರು ಪಾರ್ಕಿಂಗ್ ಸ್ಥಳದಲ್ಲಿ ಕಾರ್ ನಿಲ್ಲಿಸಿ ದೇವಾಲಯಕ್ಕೆ ಹೋಗಲು ರಸ್ತೆ ದಾಟುವಾಗ ವೇಗವಾಗಿ ಕಾರ್ ಚಾಲನೆ ಮಾಡಿಕೊಂಡು ಬಂದ ಸುಪ್ರೀತ್ ಕುಮಾರ್ ಅವರು ರಂಗರಾವ್ ಮತ್ತು ಅವರ ಕುಟುಂಬದವರ ಮೇಲೆ ಕಾರ್ ಹರಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಿಧಾನವಾಗಿ ಕಾರು ಚಾಲನೆ ಮಾಡುವಂತೆ ಸುಪ್ರೀತ್ ಕುಮಾರ್ ಗೆ ರಂಗರಾವ್ ಹೇಳಿದಾಗ ಅವಾಚ್ಯ ಪದಗಳಿಂದ ನಿಂದಿಸಿ ಕಾರ್ ನಲ್ಲಿದ್ದ ಕೋಲು ತಂದು ರಂಗರಾವ್ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ. ರಂಗರಾವ್ ಅವರ ತಲೆಗೆ ಗಾಯವಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸುಪ್ರೀತ್ ಕೂಡ ಪ್ರತಿ ದೂರು ದಾಖಲಿಸಿದ್ದು, ಕುಟುಂಬದವರೊಂದಿಗೆ ಕೃಷ್ಣಮಠದ ರಾಜಾಂಗಣ ಪಾರ್ಕಿಂಗ್ ಸಮೀಪ ರಸ್ತೆಯಲ್ಲಿ ಕಾರ್ ಚಲಾಯಿಸಿಕೊಂಡು ಹೋಗುವಾಗ ತೆಲಂಗಾಣ ಕಾರ್ ಚಾಲಕ ತನ್ನ ಕಾರ್ ಗೆ ಡಿಕ್ಕಿ ಹೊಡೆಯಲು ಬಂದಿದ್ದರು. ಈ ಕುರಿತು ಕಾರ್ ಚಾಲಕ ಮತ್ತು ಪ್ರಯಾಣಿಕರನ್ನು ಪ್ರಶ್ನಿಸಿದಾಗ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ಪತ್ನಿಯ ಮೇಲೆಯೂ ಹಲ್ಲೆ ಮಾಡಿ ಕಾರ್ ನ ಮಿರರ್ ಒಡೆದು ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿ ರಂಗರಾವ್ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ ಆರೋಪಿ ಸುಪ್ರೀತ್ ಕುಮಾರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.