ತುಮಕೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಯಾವುದೇ ಕಂಟಕವಿಲ್ಲ ಎಂದು ನೊಣವಿನಕೆರೆ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ತುಮಕೂರಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಗೆ ಪಾದಪೂಜೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿ.ಕೆ.ಶಿವಕುಮಾರ್ ಗುರುವಿನ ಆಶಿರ್ವಾದ ಪಡೆದಿದ್ದಾರೆ. ನಿರಂತರವಾಗಿ ಶ್ರೀಮಠದ ಮಗನಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಗುರುವಿನ ಆಶಿರ್ವಾದ ಅವರಿಗೆ ರಕ್ಷಾಕವಚವಾಗಲಿದೆ ಎಂದು ತಿಳಿಸಿದರು.
ಯಾವುದೇ ಕಂಟಕಬಂದರೂ ಅವರು ಜಯಶೀಲರಾಗುತ್ತಾರೆ. ಒಂಭತ್ತು ತಿಂಗಳ ಕಂಟಕದ ಬಗ್ಗೆ ಚಿಂತೆಬೇಡ. ಗುರುವಿನ ರಕ್ಷಣೆಯಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲಿವೆ ಎಂದು ತಿಳಿಸಿದ್ದಾರೆ.
ಡಿ,ಕೆ.ಶಿವಕುಮಾರ್ ಅವರು, ರೈತರು, ಬಡವರು, ಸೈನಿಕರು, ವರ್ತಕರು ಹಾಗೂ ಯುವಕರಿಗಾಗಿ ಕಂಕಣಬದ್ಧವಾಗಿ ಸೇವೆ ಸಲ್ಲಿಸಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಮಂತ್ರದೊಂದಿಗೆ ಶ್ರೀಮಠದಿಂದ ಅವರಿಗೆ ಧರ್ಮದ ದಂಡವನ್ನು ಹಸ್ತಾಂತರಿಸಲಾಗಿದೆ ಎಂದರು.
ಡಿ.ಕೆ.ಶಿವಕುಮಾರ್ ಅವರು ಸಮಾಜದ ಸೇವೆಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.