ಬೆಂಗಳೂರು: ಮತ್ತೊಮ್ಮೆ ಶ್ರೀರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರೊ.ಕೆ.ಎಸ್. ಭಗವಾನ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಗುರುವಾರ ದೂರು ನೀಡಲಾಗಿದೆ.
ಶ್ರೀರಾಮ ದಶರಥನಿಗೆ ಹುಟ್ಟಿದವನಲ್ಲ, ದಶರಥ ಪುತ್ರ ಕಾಮೇಷ್ಠಿ ಪೂಜೆ ಮಾಡುತ್ತಾನೆ. ಆ ಪೂಜೆಯಲ್ಲಿ ರಾಣಿ ಪುರೋಹಿತರ ಜೊತೆ ರಾತ್ರಿ ಮಲಗಬೇಕು. ಅಂದರೆ ನೀವೇ ಅರ್ಥಮಾಡಿಕೊಳ್ಳಿ ಎಂದು ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ದಾವಣಗೆರೆ ಜಿಲ್ಲೆ ಹರಿಹರದ ಬಿ ಕೃಷ್ಣಪ್ಪ ಮೈತ್ರಿವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವಾನ್ ಅವರು ಶ್ರೀರಾಮ ಮತ್ತು ಹಿಂದೂ ಧಾರ್ಮಿಕ ಪರಂಪರೆಗಳ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ದೂರು ನೀಡಲಾಗಿದೆ.
ಹಿಂದೂ ಧರ್ಮದ ಆರಾಧ್ಯ ದೈವ ಶ್ರೀರಾಮ, ಶ್ರೀಕೃಷ್ಣ, ಭಗವದ್ಗೀತೆ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಬಗ್ಗೆ ಪ್ರಚೋದನಾಕಾರಿ, ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರೊ.ಕೆ.ಎಸ್. ಭಗವಾನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಲಾಗಿದೆ.