ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಮತ್ತು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನು ಸಂಗೀತ ನಾಟಕ ಅಕಾಡೆಮಿಯ 2025 ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
2024 ಮತ್ತು 25ನೇ ಸಾಲಿಗೆ ಒಟ್ಟು 106 ಕಲಾವಿದರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಸಂಗೀತ ನೃತ್ಯ ಸೇರಿದಂತೆ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸುವ ಯುವ ಕಲಾವಿದರಿಗೆ ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಸ್ಮರಣಾರ್ಥ ಯುವ ಪುರಸ್ಕಾರ ಪ್ರಶಸ್ತಿ ನೀಡಲಾಗುವುದು.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶಿವಶ್ರೀ ಕಂದ ಪ್ರಸಾದ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ದೇವರಿಗೆ ಗುರುಗಳಿಗೆ ಗೌರವ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ (Sivasri Skandaprasad) ಅವರು ಪ್ರತಿಷ್ಠಿತ ಸಂಗೀತ ನಾಟಕ ಅಕಾಡೆಮಿಯ ‘ಯುವ ಪುರಸ್ಕಾರ’ (Yuva Puraskar) ಗೌರವಕ್ಕೆ ಭಾಜನರಾಗಿದ್ದಾರೆ。
ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಘೋಷಿಸಿದೆ. ಶಿವಶ್ರೀ ಅವರು ಸಂಗೀತ ಮತ್ತು ನಾಮಸಂಕೀರ್ತನೆ ಸಂಪ್ರದಾಯದ ಕುಟುಂಬದಿಂದ ಬಂದವರು. ಶಿವಶ್ರೀ ಅವರು ಬಾಲ್ಯದಿಂದಲೂ ಸಂಗೀತ ಹಾಗೂ ನೃತ್ಯ ಅಭ್ಯಾಸವನ್ನು ನಡೆಸುತ್ತಾ ಬಂದಿದ್ದಾರೆ. ಕರ್ನಾಟಕ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ತಮ್ಮ ಸಂಸ್ಥೆಯ ಮೂಲಕ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯವನ್ನು ಕಲಿಸುತ್ತಿದ್ದಾರೆ.
ಸಂಗೀತ ನಾಟಕ ಅಕಾಡೆಮಿಯ ಯುವ ಪುರಸ್ಕಾರವು ಭಾರತೀಯ ಯುವ ಕಲಾವಿದರಿಗೆ ದೊರೆಯುವ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದೆ. ಇದರ ಜೊತೆಗೆ ಇವರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಸುಬ್ಬುಲಕ್ಷ್ಮಿ ಪ್ರಶಸ್ತಿ ಮತ್ತು ಫೆಲೋಶಿಪ್ ಹಾಗೂ ಸಂಗೀತ ಶಿರೋಮಣಿ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ.