ಬೆಂಗಳೂರು: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಹೊಸದೊಂದು ಭಾರಿ ವಿವಾದಕ್ಕೆ ಸಿಲುಕಿದ್ದಾರೆ ಬೆಂಗಳೂರಿನ ಹೆಮ್ಮೆಯ ಅಸ್ಮಿತೆಯಾಗಿರುವ, ಬರೋಬ್ಬರಿ 160 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕುಮಾರಕೃಪಾ (Kumarakrupa) ಪಾರಂಪರಿಕ ಅತಿಥಿ ಗೃಹವನ್ನು ತಮ್ಮ ಗೃಹ ಕಚೇರಿಯನ್ನಾಗಿ ಪರಿವರ್ತಿಸಲು ಸಿಎಂ ನಿರ್ಧರಿಸಿದ್ದಾರೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ಅತಿಯಾಗಿ ನಂಬುವ ಡಿಕೆಶಿ, ಈ ಐತಿಹಾಸಿಕ ಕಟ್ಟಡದ ಒಳಾಂಗಣವನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಲು ಮುಂದಾಗಿದ್ದು, ಲೋಕೋಪಯೋಗಿ ಇಲಾಖೆ ಈಗಾಗಲೇ ನವೀಕರಣ ಕಾಮಗಾರಿ ಆರಂಭಿಸಿದೆ. ಈ ನಡೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ (JDS) ಅತ್ಯಂತ ಕಟುವಾದ ಪದಗಳಲ್ಲಿ ಕಿಡಿಕಾರಿದೆ
ಗಾಂಧೀಜಿ ನಡೆದ ಜಾಗದಲ್ಲಿ ದರ್ಪದ ಹೆಜ್ಜೆ ಜೆಡಿಎಸ್ ಭಾರಿ ಆಕ್ರೋಶ
ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಗಾಂಧೀಜಿ ನಡೆದ ಜಾಗದಲ್ಲಿ ಈಗ ಡಿಕೆಶಿ ದರ್ಪದ ಹೆಜ್ಜೆʼ ಎಂಬ ಕಟು ಶೀರ್ಷಿಕೆಯೊಂದಿಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, ಸಿಎಂ ನಡೆಯನ್ನು ತೀವ್ರವಾಗಿ ಖಂಡಿಸಿದೆ
“ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾವೇರಿ, ಅನುಗ್ರಹದಂತಹ ಭವ್ಯ ನಿವಾಸಗಳಿದ್ದರೂ ಇತಿಹಾಸವನ್ನು ಧ್ವಂಸಗೊಳಿಸಲು ಹೊರಟಿರುವ ಈ ನಡೆ ಉದ್ಧಟತನ ಅಷ್ಟೇ ಅಲ್ಲ, ಮೂರ್ಖತನದ ಪರಮಾವಧಿ” ಎಂದು ಜೆಡಿಎಸ್ ಕಿಡಿಕಾರಿದೆ.
ಇತಿಹಾಸಕ್ಕೆ ಮಹಾದ್ರೋಹ:
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಂಗಿದ್ದ, ದಿವಾನ್ ಕೆ. ಶೇಷಾದ್ರಿ ಅಯ್ಯರ್ ಅವರ ನೆನಪಿನ ಕುಮಾರಕೃಪ ಕಟ್ಟಡವನ್ನು ಕೇವಲ ವೈಯಕ್ತಿಕ ತೆವಲಿಗಾಗಿ, ಗೃಹ ಕಚೇರಿ ಮಾಡಿಕೊಳ್ಳಲು ಮಾರ್ಪಾಡು ಮಾಡುತ್ತಿರುವುದು ಇತಿಹಾಸಕ್ಕೆ ಬಗೆಯುವ ಮಹಾದ್ರೋಹ ಎಂದಿದೆ.
ಯಾರ ವೈಯಕ್ತಿಕ ಆಸ್ತಿಯೂ ಅಲ್ಲ:
“ಕುಮಾರ ಕೃಪ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ, ಅದು ಇತಿಹಾಸದ ಹೆಗ್ಗುರುತು. ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಬೇಕಾದವರೇ ಅದರ ವಿನಾಶಕ್ಕೆ ನಿಂತಿರುವುದು ವಿಪರ್ಯಾಸ. ಗೃಹ ಕಚೇರಿ ನೆಪದಲ್ಲಿ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ. ಪಾರಂಪರಿಕ ಕಟ್ಟಡಗಳಿಗೆ ಕೈ ಹಾಕಬೇಡಿ ಈ ಕೂಡಲೇ ನವೀಕರಣ ಕಾಮಗಾರಿಯನ್ನು ನಿಲ್ಲಿಸಿ” ಎಂದು ಜೆಡಿಎಸ್ ಆಗ್ರಹಿಸಿದೆ.
ವಾಸ್ತು ಲೆಕ್ಕಾಚಾರ: ರೂಮ್ ನಂಬರ್ 1 ಸಂಪೂರ್ಣ ನೆಲಸಮ
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಸಿಎಂ ಡಿಕೆ ಶಿವಕುಮಾರ್ ಅವರಿಗಾಗಿ ಈ ಪಾರಂಪರಿಕ ಕಟ್ಟಡದ ಒಳಾಂಗಣ ವಿನ್ಯಾಸವೇ ಸಂಪೂರ್ಣ ಬದಲಾಗುತ್ತಿದೆ.
ಕಟ್ಟಡದಲ್ಲಿರುವ ಕೊಠಡಿ ನಂಬರ್ 1 ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಲಾಗುತ್ತಿದ್ದು, ಸಂಪೂರ್ಣ ವಾಸ್ತು ಪ್ರಕಾರವೇ ನವೀಕರಣಗೊಳಿಸಲಾಗುತ್ತಿದೆ
ಮುರಿದುಬಿದ್ದ ಹಳೇ ಸಂಪ್ರದಾಯ: ಇದುವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಕೃಷ್ಣಾ ಕಟ್ಟಡವೇ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿಯಾಗಿತ್ತು. ಆದರೆ ನೂತನ ಸಿಎಂ ಡಿಕೆಶಿ ಈ ಹಳೇ ಸಂಪ್ರದಾಯವನ್ನು ಮುರಿದು, ಕುಮಾರಕೃಪಾ ಗೆಸ್ಟ್ಹೌಸ್ ಅನ್ನು ಗೃಹ ಕಚೇರಿ ಮಾಡಲು ತೀರ್ಮಾನಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏನಿದು ಕುಮಾರಕೃಪಾ ಕಟ್ಟಡದ ಅಸಲಿ ಮಹತ್ವ?
1856ರ ಇತಿಹಾಸ: ಕುಮಾರಕೃಪಾ ಅತಿಥಿಗೃಹದ ಮುಖ್ಯ ಕಲ್ಲಿನ ಕಟ್ಟಡ ನಿರ್ಮಾಣವಾಗಿದ್ದು ಬರೋಬ್ಬರಿ 1856ರಲ್ಲಿ (160 ವರ್ಷಗಳ ಹಿಂದೆ). ಇನ್ನು ಅದಕ್ಕೆ ಹೊಂದಿಕೊಂಡಿರುವ ಕಟ್ಟಡದ ಕಾಮಗಾರಿ 1960ರಲ್ಲಿ ಪೂರ್ಣಗೊಂಡಿತು.
ಮಹಾತ್ಮ ಗಾಂಧೀಜಿ ವಾಸ್ತವ್ಯ: ಈ ಮುಖ್ಯ ಕಟ್ಟಡದಲ್ಲಿ ಒಟ್ಟು 12 ಐಷಾರಾಮಿ ಕೊಠಡಿಗಳಿವೆ. ಅತ್ಯಂತ ಪ್ರಮುಖವಾದ ವಿಷಯವೆಂದರೆ, ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬೆಂಗಳೂರಿಗೆ ಬಂದಾಗ ಇದೇ ಐತಿಹಾಸಿಕ ಕಟ್ಟಡದಲ್ಲಿ ತಂಗಿದ್ದರು ಎನ್ನುತ್ತದೆ ಇತಿಹಾಸ!