ನೆರೆರಾಜ್ಯ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಒಂದು ಮೈ ನಡುಗಿಸುವ ರೋಮಾಂಚನಕಾರಿ ಘಟನೆ ನಡೆದಿದೆ ಬಿಡುವಿಲ್ಲದ ಹೆದ್ದಾರಿಯ ಮಧ್ಯೆ ಒಂಟಿಯಾಗಿ ಕುಳಿತಿದ್ದ ಪುಟಾಣಿ ಕಂದಮ್ಮನನ್ನು ಖಾಸಗಿ ಬಸ್ಸೊಂದರ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಈ ಅದ್ಭುತ ಸಮಯಪ್ರಜ್ಞೆಯಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಸಂಭವಿಸಬಹುದಾಗಿದ್ದ ಭೀಕರ ರಸ್ತೆ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ
ಕೇರಳದ ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಸಮೀಪದ ಪುಲಿಕ್ಕಲ್ನ ಕಿನಾರಪಡಿ ಬಳಿಯ ಒಲವತ್ತೂರು-ಫಾರೂಕ್ ಪಿಡಬ್ಲ್ಯೂಡಿ ರಸ್ತೆಯಲ್ಲಿ ಬೆಳಗ್ಗೆ ಸುಮಾರು 8.30ಕ್ಕೆ ಈ ಘಟನೆ ಸಂಭವಿಸಿದೆ. ಒಲವತ್ತೂರಿನಿಂದ ಫಾರೂಕ್ಗೆ ಸಫಾ ಮರ್ವಾ ಎಂಬ ಖಾಸಗಿ ಬಸ್ ಸಂಚರಿಸುತ್ತಿತ್ತು. ಆ ಸಮಯದಲ್ಲಿ ಲಘು ಮಳೆಯಾಗುತ್ತಿತ್ತು ಮತ್ತು ರಸ್ತೆಯ ತಿರುವಿನಲ್ಲಿ ದೃಷ್ಟಿ ಗೋಚರತೆ ಅತ್ಯಂತ ಕಡಿಮೆ ಇತ್ತು.
ದೇವದೂತರಾದ ಚಾಲಕ-ಕಂಡಕ್ಟರ್:
ಬಸ್ ವೇಗವಾಗಿ ತಿರುವಿನಲ್ಲಿ ಬರುತ್ತಿದ್ದಂತೆ, ಚಾಲಕ ರಾಮಚಂದ್ರನ್ ಅವರಿಗೆ ರಸ್ತೆಯ ಮಧ್ಯದಲ್ಲಿ ಏನೋ ಒಂದು ಮಗು ಒಂಟಿಯಾಗಿ ಕುಳಿತಿರುವುದು ತಕ್ಷಣವೇ ಕಣ್ಣಿಗೆ ಬಿದ್ದಿದೆ. ಜಾಗರೂಕರಾಗಿದ್ದ ಚಾಲಕ ಕ್ಷಣಾರ್ಧದಲ್ಲಿ ಭೀಕರ ಬ್ರೇಕ್ ಹಾಕಿ ಬಸ್ಸನ್ನು ಮಗುವಿನ ಅತ್ಯಂತ ಹತ್ತಿರದಲ್ಲಿ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ
ಕಂಡಕ್ಟರ್ ಮ್ಯಾರಥಾನ್ ರನ್: ಬಸ್ ನಿಲ್ಲುತ್ತಿದ್ದಂತೆ ಸೀಟಿನಿಂದ ಜಿಗಿದ ನಿರ್ವಾಹಕ (ಕಂಡಕ್ಟರ್) ನವಾಸ್ ಅಲಿ, ರಸ್ತೆಗೆ ಓಡಿಹೋಗಿ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಸುರಕ್ಷಿತವಾಗಿ ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ರಕ್ಷಿಸಲ್ಪಟ್ಟ ಈ ಅದೃಷ್ಟವಂತ ಮಗು ರಮೀಸ್ ಎಂಬುವವರ ಮಗಳಾಗಿದ್ದು, ಇನ್ನು ಒಂದು ವರ್ಷ ಕೂಡ ತುಂಬಿಲ್ಲ ಮನೆಯ ಕಂಪೌಂಡ್ ಗೇಟ್ ತೆರೆದಿದ್ದರಿಂದ ಪೋಷಕರ ಕಣ್ಣು ತಪ್ಪಿಸಿ ಸದ್ದಿಲ್ಲದೆ ತೆವಳುತ್ತಾ ಹೆದ್ದಾರಿಯ ಮಧ್ಯಕ್ಕೆ ಬಂದು ಕುಳಿತಿತ್ತು. ಆ ಸಮಯದಲ್ಲಿ ಪೋಷಕರು ವರಂಡಾದಲ್ಲಿ ಕೂತು ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು ಎನ್ನಲಾಗಿದೆ. ಬಸ್ ಸಿಬ್ಬಂದಿ ಮಗುವನ್ನು ಮರಳಿ ಮನೆಗೆ ತಂದು ಒಪ್ಪಿಸಿದಾಗಲೇ ಪೋಷಕರಿಗೆ ಅಸಲಿ ವಿಷಯ ಗೊತ್ತಾಗಿದ್ದು
ಸಕಾಲದಲ್ಲಿ ಮಗುವಿನ ಪ್ರಾಣ ಉಳಿಸಿದ ಬಸ್ ಚಾಲಕ ಮತ್ತು ನಿರ್ವಾಹಕನ ಸಾಹಸಕ್ಕೆ ಇಡೀ ದೇಶವೇ ಸೆಲ್ಯೂಟ್ ಹೊಡೆಯುತ್ತಿದೆ. ಕೇರಳದ ಸಾರಿಗೆ ಸಚಿವರು ಹಾಗೂ ಕಾರ್ಮಿಕ ಸಚಿವರು ಖುದ್ದಾಗಿ ಚಾಲಕ ರಾಮಚಂದ್ರನ್ ಹಾಗೂ ಕಂಡಕ್ಟರ್ ನವಾಸ್ಗೆ ಫೋನ್ ಮಾಡಿ ಅಭಿನಂದಿಸಿದ್ದಾರೆ. ಇತ್ತ ಮೋಟಾರು ವಾಹನ ಇಲಾಖೆ (MVD) ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದೆ
“ವಾಹನ ಚಾಲನೆ ಮಾಡುವಾಗ ‘ಯಾವಾಗ ಏನು ಬೇಕಾದರೂ ಸಂಭವಿಸಬಹುದು’ ಎಂಬ ಜಾಗರೂಕತೆಯನ್ನು ಚಾಲಕರು ಹೊಂದಿರಬೇಕು. ಯಾವುದೇ ಅಪಘಾತಕ್ಕೆ ಆಸ್ಪದ ನೀಡದೆ ಬಸ್ ನಿಲ್ಲಿಸಿ, ಮಗುವಿನ ಜೀವ ಉಳಿಸಿದ ರಾಮಚಂದ್ರನ್ ಮತ್ತು ನವಾಸ್ ಅವರ ಸಮಯಪ್ರಜ್ಞೆಗೆ ನಮ್ಮ ಅಭಿನಂದನೆಗಳು.” ಎಂದು ತಿಳಿಸಿದೆ.
(@RebelliousPari8)