ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಹಾಗೂ ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಧರ್ಮದ ಆಧಾರದ ಮೇಲೆ ಉದ್ಯೋಗದ ಅವಕಾಶವನ್ನು ನಿರಾಕರಿಸಲಾಗಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಂಗಳೂರಿನ ಕಾನೂನು ವಿದ್ಯಾರ್ಥಿಯೊಬ್ಬರು ಮಾಡಿರುವ ಲಿಂಕ್ಡ್ಇನ್ (LinkedIn) ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಹೊಸದೊಂದು ದೊಡ್ಡ ವಿವಾದಕ್ಕೆ ಕಿಡಿ ಹೊತ್ತಿಸಿದೆ
ಬೆಂಗಳೂರಿನ ಕಾನೂನು ಸಂಸ್ಥೆಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿರುವ ಮೊಹಮ್ಮದ್ ಅಮೀನ್ ಎಂಬ ವಿದ್ಯಾರ್ಥಿ ಈ ಆಘಾತಕಾರಿ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಆರೋಪಕ್ಕೆ ಗುರಿಯಾಗಿರುವ ಕಂಪನಿ ಯಾವುದು ಎಂಬುದು ಇನ್ನು ಬಹಿರಂಗವಾಗಿಲ್ಲ ಹಾಗೂ ಈ ಆರೋಪಗಳು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ.
ವಾಟ್ಸಾಪ್ ಸ್ಕ್ರೀನ್ಶಾಟ್ ಬಿಡುಗಡೆ: ಕಂಗಾಲಾಗಿಸಿದ ರೆಕ್ರೂಟರ್ ಮೆಸೇಜ್
ಮೊಹಮ್ಮದ್ ಅಮೀನ್ ಅವರ ಪ್ರಕಾರ, ಈ ಘಟನೆ ನಡೆದಿರುವುದು ಅವರ ಆಪ್ತ ಸ್ನೇಹಿತನೊಬ್ಬನಿಗೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಆ ಅಭ್ಯರ್ಥಿಯನ್ನು ಇಂಟರ್ವ್ಯೂ ಹಂತಕ್ಕೂ ಕರೆಯದೆ ನೇರವಾಗಿ ರಿಜೆಕ್ಟ್ ಮಾಡಲಾಗಿತ್ತು. ಆದರೆ, ಅದಕ್ಕೆ ನೀಡಲಾದ ಕಾರಣ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ
ಧರ್ಮವೇ ರಿಜೆಕ್ಷನ್ಗೆ ಕಾರಣ?: ತನ್ನ ಆರೋಪಕ್ಕೆ ಪುಷ್ಟಿ ನೀಡಲು ಅಮೀನ್ ಅವರು ವಾಟ್ಸಾಪ್ ಚಾಟ್ನ ಸ್ಕ್ರೀನ್ಶಾಟ್ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಕಂಪನಿಯ ರೆಕ್ರೂಟರ್ (ಉದ್ಯೋಗ ನೀಡುವ ಅಧಿಕಾರಿ), ಅಭ್ಯರ್ಥಿಯ ಧರ್ಮದ ಕಾರಣಕ್ಕಾಗಿಯೇ ಆತನ ಪ್ರೊಫೈಲ್ ಅನ್ನು ಮುಂದಿನ ಹಂತಕ್ಕೆ ಪರಿಗಣಿಸುತ್ತಿಲ್ಲ ಎಂದು ನೇರವಾಗಿ ಹೇಳಿರುವುದು ಕಂಡುಬಂದಿದೆ
ವಿದ್ಯಾರ್ಹತೆಗೆ ಬೆಲೆಯಿಲ್ವಾ?: ಅಭ್ಯರ್ಥಿಯ ವಿದ್ಯಾರ್ಹತೆ, ಅನುಭವ ಅಥವಾ ಕೌಶಲ್ಯಗಳನ್ನು ಪರಿಗಣಿಸದೆ, ಕೇವಲ ಆತನ ಧರ್ಮದ ಗುರುತನ್ನು ನೋಡಿ ಇಂಟರ್ವ್ಯೂ ಅವಕಾಶ ನಿರಾಕರಿಸಿರುವುದು ಅತ್ಯಂತ ಆಘಾತಕಾರಿ ಮತ್ತು ಬೇಸರದ ಸಂಗತಿ ಎಂದು ಕಾನೂನು ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಆಶಯ ಮತ್ತು ಇಂದಿನ ಕಹಿ ವಾಸ್ತವ
ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೀನ್, “ನಾವು ಕಾನೂನು ಮತ್ತು ಶೈಕ್ಷಣಿಕ ವಲಯದಲ್ಲಿ ಸಮಾನತೆ ಹಾಗೂ ತಾರತಮ್ಯ ವಿರೋಧದ ಬಗ್ಗೆ ದೊಡ್ಡದಾಗಿ ಮಾತನಾಡುತ್ತೇವೆ. ಆದರೆ ನಿಜ ಜೀವನದ ಅನುಭವಗಳಿಗೂ ಮತ್ತು ನಮ್ಮ ಸಂವಿಧಾನದ ಆಶಯಗಳಿಗೂ ನಡುವೆ ಎಷ್ಟು ದೊಡ್ಡ ಕಂದಕವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ” ಎಂದಿದ್ದಾರೆ.
ಅಲ್ಲದೇ, ಇಂತಹ ತಾರತಮ್ಯ ಎದುರಿಸುವ ಅನೇಕರು ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ ಮತ್ತು ಕಾನೂನು ಹೋರಾಟದ ಕಷ್ಟಗಳಿಗೆ ಹೆದರಿ ಸುಮ್ಮನಾಗುತ್ತಾರೆ. ನನ್ನ ಉದ್ದೇಶ ಕೇವಲ ಸಮಾಜದಲ್ಲಿ ಜಾಗೃತಿ ಮೂಡಿಸುವುದೇ ಹೊರತು ಯಾವುದೇ ಆನ್ಲೈನ್ ಅಟೆನ್ಷನ್ ಪಡೆಯುವುದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಭೀಕರ ಚರ್ಚೆ
ಈ ಪೋಸ್ಟ್ಗೆ ಲಿಂಕ್ಡ್ಇನ್ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ:
ಒಂದು ವರ್ಗದ ಆಕ್ರೋಶ: ಯಾವುದೇ ಉದ್ಯೋಗವನ್ನು ಅಭ್ಯರ್ಥಿಯ ಕೌಶಲ್ಯ ಮತ್ತು ಯೋಗ್ಯತೆಯ ಮೇಲೆ ನೀಡಬೇಕೇ ಹೊರತು ಧರ್ಮ ಅಥವಾ ಜಾತಿಯ ಆಧಾರದ ಮೇಲಲ್ಲ. ಇದು ಸಮಾಜದಲ್ಲಿ ಇನ್ನು ಜೀವಂತವಾಗಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರಮುಖ ಟೆಕ್ ಕನ್ಸಲ್ಟೆಂಟ್ (ತಂತ್ರಜ್ಞಾನ ಸಲಹೆಗಾರ) ಒಬ್ಬರು ಕೂಡ ಈ ಪೋಸ್ಟ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. “ಒಂದು ವೇಳೆ ಈ ಘಟನೆ ನಿಜವಾಗಿದ್ದರೆ, ದಯವಿಟ್ಟು ಇದರ ಸಂಪೂರ್ಣ ವಿವರಗಳನ್ನು ಜಗತ್ತಿಗೆ ತಿಳಿಸಿ. ಅದು ಯಾವ ಕಂಪನಿ? ಇಂತಹ ಮೆಸೇಜ್ ಕಳುಹಿಸಿದ ಆ ಎಚ್ಆರ್ (HR) ಯಾರು? ಅವರ ಹೆಸರೇನು ಎಂಬುದನ್ನು ಬಹಿರಂಗಪಡಿಸಿ. ಆಗ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಾಧ್ಯ,” ಎಂದು ಒತ್ತಾಯಿಸಿದ್ದಾರೆ