ಶಿವಮೊಗ್ಗ: ಶಿವಮೊಗ್ಗದ ರವೀಂದ್ರನಗರ ಬಡಾವಣೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಹಾಗೂ ಅವರ ಸಾಕು ನಾಯಿಯ ಶವ ಪತ್ತೆಯಾಗಿದೆ.
ರವೀಂದ್ರ ನಗರದ ಮೊದಲನೇ ತಿರುವಿನಲ್ಲಿರುವ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಮನೆಯ ಬಾಗಿಲು ಒಡೆದು ನೋಡಿದಾಗ ಮನೆಯ ಮಾಲತಿಯ ಮೃತ ದೇಹ ಮತ್ತು ಸಾಕು ನಾಯಿಯ ಕಳೆಬರ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಜನವಾರ್ತೆ ಪತ್ರಿಕೆ ಸಂಪಾದಕರಾಗಿದ್ದ ನಾಗರಾಜ್ ಅವರ ಪತ್ನಿ ಪ್ರಭಾವತಿ(60) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಪ್ರಭಾವತಿ ದೇವರ ಕೋಣೆಯಲ್ಲಿ ಮೃತಪಟ್ಟಿದ್ದು, ಹಾಲ್ ನಲ್ಲಿ ನಾಯಿ ಸಾವನ್ನಪ್ಪಿದೆ. ಮೃತರಿಗೆ ಮೂವರು ಪುತ್ರಿಯರಿದ್ದು, ಮದುವೆಯಾಗಿ ಬೇರೆ ಕಡೆ ವಾಸವಾಗಿದ್ದಾರೆ.
ಅಕ್ಕಪಕ್ಕದವರು ದುರ್ವಾಸನೆ ಬರುತ್ತಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಯನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಭಾವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಜನವಾರ್ತೆ ಪತ್ರಿಕೆ ಸಂಪಾದಕ ನಾಗರಾಜ್ ನಿಧನರಾಗಿದ್ದರು. ಪ್ರತಿದಿನ ಮನೆಯ ಸಮೀಪದ ಕ್ಯಾಂಟೀನ್ ನಲ್ಲಿ ಪ್ರಭಾವತಿ ತಿಂಡಿ ತೆಗೆದುಕೊಂಡು ಹೋಗುತ್ತಿದ್ದರು. ಕೆಲವು ದಿನಗಳಿಂದ ಅವರು ಕ್ಯಾಂಟೀನ್ ಗೆ ಹೋಗಿರಲಿಲ್ಲ ಎನ್ನಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.