ಬೆಂಗಳೂರು: ಬಹುಚರ್ಚಿತ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಉಲ್ಲೇಖವಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ, ಕೆಲ ಕಾರ್ಯಕರ್ತರ ಮೂಲಕ ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆದಿತ್ತು ಎಂದು ಆರೋಪಿಸಲಾಗಿದೆ.
ಅರ್ಜಿದಾರನ ಆರೋಪದ ಪ್ರಕಾರ, ಕೆಲವು ವ್ಯಕ್ತಿಗಳು ತನಗೆ ಅಧಿಕಾರಿಗಳ ಮುಂದೆ ನಿರ್ದಿಷ್ಟ ರೀತಿಯ ಹೇಳಿಕೆ ನೀಡುವಂತೆ ಸೂಚನೆ ನೀಡಿದ್ದರು. ಈ ವೇಳೆ ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರೂ ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರಾಜ್, ತಮ್ಮ ವಿರುದ್ಧ ಹರಿದಾಡುತ್ತಿರುವ ಆರೋಪಗಳನ್ನು “ಗಾಳಿಸುದ್ದಿ” ಎಂದು ತಳ್ಳಿ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಧರ್ಮಸ್ಥಳ ಪ್ರಕರಣ ಅತ್ಯಂತ ಸೂಕ್ಷ್ಮವಾದ ವಿಷಯವಾಗಿದ್ದು, ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದೆ. ಆದ್ದರಿಂದ ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಬಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ತಿಳಿಸಿದ್ದರು. ಇದೀಗ ಈ ಆರೋಪಗಳಿಗೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಕುರಿತು ನಟ ಪ್ರಕಾಶ್ ರಾಜ್ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ. ಚಿನ್ನಯ್ಯ ಎಂಬ ವ್ಯಕ್ತಿಯೊಂದಿಗೆ ತಾವು ಮಾತನಾಡಿದ್ದು ನಿಜ, ಆದರೆ ಆತ ತಮ್ಮೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಎಂದು ಅವರು ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರಾಜ್, “ಕೋರ್ಟ್ನಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಲಾಗಿದೆ. ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ನಾನು ಮಾತನಾಡಿದ್ದೇನೆ ಎಂದು ಹೇಳಲಾಗಿದೆ. ಕೇರಳದಿಂದ ಹಣ ಬಂದಿದೆ ಎಂಬ ಆರೋಪಗಳ ಜೊತೆಗೆ ನನ್ನ ಹೆಸರನ್ನೂ ಎಳೆದು ತರುವ ಪ್ರಯತ್ನ ಮಾಡಲಾಗಿದೆ. ಆದರೆ ನಾನು ಜೀವನದಲ್ಲಿ ಒಮ್ಮೆಯೂ ಧರ್ಮಸ್ಥಳಕ್ಕೆ ಹೋಗಿಲ್ಲ. ಗಿರೀಶ್ ಮಟ್ಟಣ್ಣನವರ್ ಅವರನ್ನು ಭೇಟಿಯೂ ಮಾಡಿಲ್ಲ” ಎಂದು ಹೇಳಿದರು.
‘ಎಸ್ಐಟಿ ತನಿಖೆಗೆ ಆಗ್ರಹಿಸಿದ್ದೆ’
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ತಾವು ಸಾಮಾಜಿಕ ಕಾರ್ಯಕರ್ತನಾಗಿ ಎಸ್ಐಟಿ ತನಿಖೆಗೆ ಆಗ್ರಹಿಸಿದ್ದೆ ಎಂದು ಪ್ರಕಾಶ್ ರಾಜ್ ತಿಳಿಸಿದರು. “ಈ ವೇಳೆ ಒಬ್ಬ ವ್ಯಕ್ತಿ ಕರೆ ಮಾಡಿ ‘ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತನಾಡಬೇಕು’ ಎಂದ. ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ. ನಂತರ ಆ ವಿಷಯವನ್ನು ಪ್ರಣವ್ ಮೊಹಂತಿ ಅವರಿಗೆ ತಿಳಿಸಿದ್ದೆ. ಚಿನ್ನಯ್ಯ ಮಂಡ್ಯದವನು ಎಂಬುದು ಗೊತ್ತಿದ್ದರೂ, ಆತ ತಮಿಳಿನಲ್ಲೇ ಮಾತನಾಡಿದ್ದ” ಎಂದು ವಿವರಿಸಿದರು.
‘ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಮಾಡುವ ಪ್ರಶ್ನೆಯೇ ಇಲ್ಲ’
“ಚಿನ್ನಯ್ಯ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎಂಬುದು ಈಗ ತನಿಖೆಯಲ್ಲಿ ಗೊತ್ತಾಗಿದೆ. ನಾನು ಯಾವುದೇ ಪ್ರಶ್ನೆ ಕೇಳಿದರೂ ಕೆಲವರು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಾರೆ. ಈ ಪ್ರಕರಣ ಇನ್ನೂ ನ್ಯಾಯಾಲಯದ ವಿಚಾರಣೆಯಲ್ಲಿದೆ. ನಾನು ಧರ್ಮಸ್ಥಳಕ್ಕೆ ಹೋಗಿಯೇ ಇಲ್ಲ. ಹಾಗಿರುವಾಗ ಧರ್ಮಸ್ಥಳದ ವಿರುದ್ಧ ನಾನು ಷಡ್ಯಂತ್ರ ನಡೆಸುತ್ತೇನೆ ಎನ್ನುವುದು ಅಸಂಬದ್ಧ” ಎಂದು ಪ್ರಕಾಶ್ ರಾಜ್ ಹೇಳಿದರು.
‘ಭೇಟಿ ಮಾಡುವ ಬದಲು ರೆಕಾರ್ಡ್ ಕಳುಹಿಸುವಂತೆ ಹೇಳಿದ್ದೆ’
ಚಿನ್ನಯ್ಯ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತಮ್ಮನ್ನು ಭೇಟಿಯಾಗಲು ಬಯಸಿದ್ದ ವಿಚಾರವನ್ನೂ ಪ್ರಕಾಶ್ ರಾಜ್ ಬಹಿರಂಗಪಡಿಸಿದರು. “ಅವನು ‘ನಿಮ್ಮನ್ನು ಭೇಟಿಯಾಗಬೇಕು’ ಎಂದಾಗ, ನಾನು ‘ನಿನ್ನನ್ನು ಯಾಕೆ ಭೇಟಿಯಾಗಬೇಕು? ಹೇಳಬೇಕಾದ ವಿಷಯ ಇದ್ದರೆ ಅದನ್ನು ರೆಕಾರ್ಡ್ ಮಾಡಿ ಕಳುಹಿಸು’ ಎಂದು ಹೇಳಿದ್ದೆ. ಜೊತೆಗೆ ‘ಪ್ರಣವ್ ಮೊಹಂತಿ ಸರ್ ಇದ್ದಾರೆ, ಅವರನ್ನು ಭೇಟಿ ಮಾಡು’ ಎಂದಿದ್ದೆ” ಎಂದು ಸ್ಪಷ್ಟಪಡಿಸಿದರು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ಹೇಳಿಕೆ ಹಾಗೂ ಪ್ರಕಾಶ್ ರಾಜ್ ಅವರ ಸ್ಪಷ್ಟನೆ ಹೊಸ ಚರ್ಚೆಗೆ ಕಾರಣವಾಗಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.