ಬೆಂಗಳೂರು- ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಒಬಿಸಿ ವರ್ಗದ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಶೆಡ್ಯೂಲ್ 9 ಗೆ ಸೇರಿಸಬೇಕು. ಅನಗತ್ಯವಾಗಿ ಈ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರು, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಢಿಯನ್ನುದ್ದೇಶಿಸಿ ಮಾತನಾಡಿದ ಉಗ್ರಪ್ಪ, ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಳ ವಿಚಾರವನ್ನು ಬಿಜೆಪಿ ನಾಯಕರಾದ ಶ್ರೀರಾಮುಲು, ಬಿ.ವೈ. ವಿಜಯೇಂದ್ರ, ಬಸವರಾಜ್ ಬೊಮ್ಮಾಯಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶೇ.56 ರಷ್ಟು ಮೀಸಲಾತಿ ಹೆಚ್ಚಿಸಿ ಬಿಜೆಪಿ ಸರ್ಕಾರವೇ ಆದೇಶ ಹೊರಡಿಸಿತು. ಆದರೆ ಅದಾದ ನಂತರ ಈ ಕಾಯ್ದೆಯನ್ನು ಶೆಡ್ಯೂಲ್ 9 ಗೆ ಸೇರಿಸಬೇಕಿತ್ತು. ಆದರೆ ಈಗ ಆ ಕೆಲಸ ಮಾಡದೆ ರಾಜಕಾರಣ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಮತ್ತೆ ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳ ಮಾಡ್ತೇವೆ ಎಂದು ಹೇಳಿಕೆ ನೀಡ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಸಮುದಾಯದ ಜನರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ನಮ್ಮ ಜನ ದಡ್ಡರಲ್ಲ. ಚುನಾವಣೆ ಸಮಯದಲ್ಲಿ ಬುದ್ದಿ ಕಲಿಸ್ತಾರೆ ಎಂದು ಗುಡುಗಿದರು.
ಮೀಸಲಾತಿ ವಿಚಾರದ ಬಗ್ಗೆ ನಮ್ಮ ವೇದಿಕೆಯ ಪದಾಧಿಕಾರಿಗಳೆಲ್ಲ ಒಟ್ಟಾಗಿ ಜಾಗೃತಿಗಾಗಿ 27 ಜಿಲ್ಲೆಗಳ ಪ್ರವಾಸ ಮುಗಿಸಿದ್ದೇವೆ. ಪಕ್ಷಾತೀತವಾಗಿ ಬೆಂಬಲ ಶುರುವಾಗಿದೆ. ಮಾತನಾಡದವರೂ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಮಂತ್ರಿಗಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದಾರೆ. ಬಿಜೆಪಿ ಸಭೆ ಮಾಡಿ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ಅನ್ಯಾಯದ ಅರಿವಾಗಿದೆ. ಈ ಪ್ರಯತ್ನದಲ್ಲಿ ಕೈಜೋಡಿಸಿದವರಿಗೆ ಅಭಿನಂದನೆಗಳು ಎಂದು ಉಗ್ರಪ್ಪ ಹೇಳಿದರು.
ಇಂದಿರಾ ಸಾನಿ ಕೇಸ್ ನಲ್ಲಿ 56% ಮೀಸಲಾತಿ ಒವರ್ ಕಮ್ ಮಾಡಲು ತಮಿಳುನಾಡಿನ ರೀತಿ ನಮ್ಮ ರಾಜ್ಯದ ಕಾನೂನನ್ನು ಶೆಡ್ಯೂಲ್ 9 ಗೆ ಸೇರಿಸಬೇಕು. ಶ್ರೀರಾಮುಲು ಬಹಳ ವೀರಾವೇಶದಿಂದ ಮಾತನಾಡಿದ್ದಾರೆ. ಈ ಸಮುದಾಯಕ್ಕೆ ನ್ಯಾಯ ಕೊಡಿಸುವ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಡಿ. ಶ್ರೀರಾಮುಲು ಅವರೇ ಚುನಾವಣೆಗೆ ನಮ್ಮ ಜನರನ್ನು ಒಡೆಯುವ ಪ್ರಯತ್ನ ಮಾಡಬೇಡಿ. 23 ಮಾರ್ಚ್ 2023 ರಲ್ಲಿ ಕೇಂದ್ರ ಸರ್ಕಾರಕ್ಕೆ ನೀವೇ ಪತ್ರ ಬರೆದಾಗ ಯಾವ ಕಾನೂನು ತೊಡಕು ಇರಲಿಲ್ಲ. ಆದರೆ ಆಗ ಒತ್ತಾಯ ಮಾಡಿದ್ದರೆ ಶೆಡ್ಯೂಲ್ 9 ಗೆ ಸೇರಿಸಬಹುದಿತ್ತು. ನಿಮಗೆ ಸ್ವಾಭಿಮಾನ ಇದ್ರೆ ನಿಮ್ಮ ಬಿಜೆಪಿ ನಾಯಕರ ಪತ್ರಕ್ಕೆ ಮೋದಿ ಬೆಲೆ ಕೊಡಬೇಕಲ್ವಾ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಈಗ ಮತ್ತೆ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ಹೆಚ್ಚಳ ಮಾಡ್ತೀವಿ ಅಂತೀರಿ. ಇದರಿಂದ ನಿಮ್ಮ ನಿಜ ಬಣ್ಣ ಬಯಲಾಗುತ್ತಿದೆ. ಪ್ರಧಾನಿ ಮೋದಿ ಮೇಲೆ ಒತ್ತಡ ತಂದು 2022 ರ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್ 9 ಗೆ ಸೇರಿಸಬೇಕು. ನಾಯಕ ಸಮುದಾಯದ ಓಲೈಕೆ ಮಾಡಲು ಹೋದರೆ ಇದು ನಿಮ್ಮ ದಡ್ಡತನ. ನಾನೂ ಕಾಂಗ್ರೆಸ್ ಪಕ್ಷದಲ್ಲಿ ಇದ್ರೂ ಕೂಡ ಈಗಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೂ ಪತ್ರ ಬರೆದಿದ್ದೇನೆ. ಪ್ರಧಾನಿ ಮೋದಿ ಬಳಿ ಸರ್ವಪಕ್ಷ ಸಭೆ ತೆಗೆದುಕೊಂಡು ಹೋಗಲು ಒತ್ತಡ ಹೇರಿದ್ದೇವೆ ಎಂದು ಹೇಳಿದರು.
ಬಿಜೆಪಿ ನಾಯಕರಾದ ಶ್ರೀರಾಮುಲು, ಬಸವರಾಜ್ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ ಅವರೇ ಈ ಸಮಾಜವನ್ನು ರಾಜಕೀಯವಾಗಿ ಬಳಸಿಕೊಳ್ಳೋಕೆ ಹೋಗಬೇಡಿ. ನೀವೇ ಬರೆದ ಪತ್ರಕ್ಕೆ ಬೆಲೆ ಇಲ್ಲ ಅನ್ನೋದಾದ್ರೆ, ನಿಮಗೂ ಮುಂದಿನ ಚುನಾವಣೆಯಲ್ಲಿ ಮೂರು ಕಾಸಿನ ಕಿಮ್ಮತ್ತು ಇರೋದಿಲ್ಲ ನೆನಪಿಟ್ಟುಕೊಳ್ಖಿ ಎಂದು ವಿ.ಎಸ್. ಉಗ್ರಪ್ಪ ನೇರ ಎಚ್ಚರಿಕೆ ನೀಡಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಹಾಗೂ ನ್ಯಾ. ಸುಭಾಷ್ ಅಡಿ ಅವರ ಆಯೋಗ ಮಾಡಿರುವ ಶಿಫಾರಸ್ಸು ಜಾರಿಗೊಳಿಸಬೇಕು. ಸರ್ವಪಕ್ಷ ನಿಯೋಗವನ್ನು ಬಿಜೆಪಿ ನಾಯಕರೇ ಕರೆದರೂ ನಾವು ಬರಲು ತಯಾರಿದ್ದೇವೆ. ಮೇಲ್ವರ್ಗದವರಿಗೆ ಶೇ.10% ಮೀಸಲಾತಿ ಕೇಳದೆ ಕೊಟ್ಟಾಯ್ತು. ಆದರೆ ಈಗ ತಳ ಸಮುದಾಯಗಳಿಗೆ ಮೀಸಲಾತಿ ಕೊಡುವಾಗ ಇಚ್ಚಾಶಕ್ತಿ ಕೊರತೆ ಕಾಣ್ತಿದೆ. ಜಾತಿಗಳನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವ ಪ್ರಯತ್ನ ಮಾಡುವುದು ಸರಿಯಲ್ಲ. ಜಾತಿಗಳನ್ನು ಒಡೆದಾಳುವ ಪ್ರವೃತಿ ಬಿಡಿ. ನಾವು ಪ್ರಾಣ ಬೇಕಿದ್ರೂ ಬಿಡ್ತೇವೆ. ಮೀಸಲಾತಿ ವಿಚಾರ ಕೈಬಿಡೊಲ್ಲ. ನಾವು ರಾಜಕಾರಣಕ್ಕಾಗಿ ಹೋರಾಟ ಮಾಡ್ತಿಲ್ಲ. ಈ ಜನರ ಹಕ್ಕುಗಳಿಗಾಗಿ ಹೋರಾಟ ಮಾಡ್ತಿದ್ದೇವೆ. ಇದಕ್ಕೆ ಎಲ್ಲ ಪಕ್ಷದ ನಾಯಕರೂ ಜೊತೆಯಾಗಬೇಕು ಎಂದು ಹೇಳಿದರು.
ಭಗವಾನ್ ಕ್ಷಮೆಯಾಚನೆ ಮಾಡಬೇಕು:
ವಯಸ್ಸಿನ ಕಾರಣಕ್ಕೋ, ಪ್ರಚಾರದ ಕಾರಣಕ್ಕೋ, ಅಜ್ಞಾನದ ಕಾರಣಕ್ಕೋ ಹಿರಿಯ ಸಾಹಿತಿ ಕೆ.ಎಸ್. ಭಗವಾನ್ ತಿಕ್ಕಲುತನ ಪ್ರದರ್ಶನ ಮಾಡ್ತಿದ್ದಾರೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.
ಭಗವಾನ್ ಅವರು ರಾಮಾಯಣದ ಬಗ್ಗೆ ಮಾತಾಡ್ತಾರೆ. ಕುವೆಂಪು ಅವರು ವಾಲ್ಮೀಕಿ ರಾಮಾಯಣವನ್ನು ಮತ್ತೊಮ್ಮೆ ಅರ್ಥವತ್ತಾಗಿ ಹೇಳಿದ್ದಾರೆ. 700 ಸಾವಿರ ವರ್ಷಗಳ ಹಿಂದೆ ರಾಮಾಯಣ ಬರೆದ ವಾಲ್ಮೀಕಿಯನ್ನು ಆದಿ ಕವಿ ಅಂತ ಗೌರವಿಸ್ತಾರೆ. ಆದರೆ ಸಾಹಿತಿ ಭಗವಾನ್ ಯಾವಾಗ ಎಷ್ಟು ಸರಿ ರಾಮಾಯಣ ಓದಿದ್ದಾರೆ ಗೊತ್ತಿಲ್ಲ. ರಾಜ ಹೇಗಿರಬೇಕು, ಮಂತ್ರಿ ಹೇಗಿರಬೇಕು, ಮಂತ್ರಿಮಂಡಲ ಹೇಗಿರಬೇಕು? ವಿಚಾರಹೀನರು ಮಂತ್ರಿಮಂಡಲದಲ್ಲಿ ಇದ್ರೆ ಆ ರಾಜ್ಯ ಉದ್ದಾರ ಆಗೊಲ್ಲ ಅಂತ ಆಗಲೇ ಬರೆದಿದ್ದಾರೆ. ಟ್ಯಾಕ್ಸ್ ಯಾವಾಗ ಹಾಕಬೇಕು, ಸರ್ ಪ್ಲಸ್ ಬಜೆಟ್ ಮಂಡನೆ ಬಗ್ಗೆ ಆಗಲೇ ವಾಲ್ಮೀಕಿ ಹೇಳಿದ್ದಾರೆ. ಇದ್ಯಾವುದರ ಅರಿವಿಲ್ಲದ ಭಗವಾನ್, ಶಂಬೂಕನ ಪ್ರಸಂಗ ಇಟ್ಕೊಂಡು ಇಲ್ಲಸಲ್ಲದ ಮಾತನಾಡ್ತಾರೆ. ಸೀತೆಯ ಜಾತಿ ಯಾವುದು? ಭಗವಾನ್ ಹೇಳ್ತಾರಾ? ಮಹರ್ಷಿ ವಾಲ್ಮೀಕಿ ಜಾತಿ ಮುಖ್ಯವಲ್ಲ. ಮನುಷ್ಯತ್ವ ಮುಖ್ಯ ಎಂಬ ಸಂದೇಶ ಸಾರಿದ್ದಾರೆ. ಇದ್ಯಾವುದೂ ತಿಳಿಯದ ಭಗವಾನ್ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪ್ರಯತ್ನ ಮಾಡ್ತಿದ್ದಾರೆ. ನಿಮಗೆ ವಿಧ್ವತ್ ಇದ್ರೆ ನೀವು ಮನುಕುಲದ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಸರ್ಕಾರ ತಕ್ಷಣ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಭಗವಾನ್ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಉಗ್ರಪ್ಪ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಕಾರ್ಯಾಧ್ಯಕ್ಷರಾದ ಎಂ. ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಉಪಾಧ್ಯಕ್ಷರಾದ ರಾಜಣ್ಣ ಟಿ., ಪ್ರಧಾನ ಕಾರ್ಯದರ್ಶಿಗಳಾದ ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ನಿವೃತ್ತ ಕುಲಪತಿ ಶ್ರೀರಾಮುಲು, ಕೆ. ವಿ. ನಾಗೇಂದ್ರ, ವೇಣುಗೋಪಾಲ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.