ಕೋಲಾರ: ಪತಿಮಹಾಶಯನೊಬ್ಬ ಪತ್ನಿಗೆ ವರದಕ್ಷಿಣೆ ತರುವಂತೆ ಚಿತ್ರಹಿಂಸೆ ನೀಡಿ ಹೊಡೆದು ಕೊಲೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಹಸಾಳ ಗ್ರಾಮದಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ ನೀಡಿದ್ದೂ ಅಲ್ಲದೇ ಪತ್ನಿಯನ್ನು ಕುಕ್ಕರ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಕಿರಾತಕ ಪತಿ. ಸಹನಾ (24) ಪತಿಯಿಂದ ಕೊಲೆಯಾದ ಮಹಿಳೆ. ಮಂಜುನಾಥ್ ಪತ್ನಿಯನ್ನು ಹತ್ಯೆಗೈದ ಆರೋಪಿ.
ದಂಪತಿಗೆ ಮದುವೆಯಾಗಿ 5 ವರ್ಷವಾಗಿದ್ದು, ಇಬ್ಬರು ಗಂಡುಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಪದೇ ಪದೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟೋದಕ್ಕೆ 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದನಂತೆ. ಹಣದ ವಿಚಾರವಾಗಿ ಪದೇ ಪದೇ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಈ ಹಿಂದೆಯೂ ಹಲವು ನ್ಯಾಯ ಪಂಚಾಯಿತಿಗಳು ಸಹ ನಡೆದಿದ್ದವು.
ನಿನ್ನೆ ಸಹನಾ, ತನ್ನ ತಾಯಿ ಜಯಮ್ಮಗೆ ವಿಡಿಯೋ ಕಾಲ್ ಮಾಡಿ ಅಮ್ಮ ನನ್ನ ಹೊಡೆಯುತ್ತಿದ್ದಾರೆ. ನೋಡು ಮೂಗಲ್ಲಿ ರಕ್ತ ಬರುತ್ತಿದೆ ಎಂದು ಹೇಳಿಕೊಂಡಿದ್ದಳು. ತಡ ರಾತ್ರಿ ಪತಿ ಮಂಜುನಾಥ್ ಪತ್ನಿ ತಲೆಗೆ ಕುಕ್ಕರ್ ನಿಂದ ಹಲ್ಲೆ ಮಾಡಿದ್ದಾನೆ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ನೇಣು ಬಿಗಿದಿದ್ದಾನೆ. ಬೆಳಗಾಗುವಷ್ಟರಲ್ಲಿ ಸಹನಾ ಸಾವಿನ ಸುದಿ ಪೋಷಕರಿಗೆ ತಲುಪಿದ್ದು, ಮನೆಗೆ ಬಂದು ನೊಡುವಷ್ಟರಲ್ಲಿ ಮಗಳು ಶವವಾಗಿದ್ದಳು.
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.