ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಗೆ ರಾಜ್ಯಸಭಾ ಸ್ಥಾನ ಕೈತಪ್ಪಿದ ಬಗ್ಗೆ ಪ್ರತಿಕ್ರಿಯಿಸಿರುವ ಶಾಅಸಕ ಹೆಚ್.ಡಿ. ರೇವಣ್ಣ, ದೇವೇಗೌಡರು ಅಧಿಕಾರಕ್ಕಾಗಿ ಎಂದಿಗೂ ಯಾರ ಬಾಗಿಲಿಗೂ ಹೋಗಿಲ್ಲ. ಪ್ರಧಾನಮಂತ್ರಿ ಹುದ್ದೆಯನ್ನೇ ಅವರು ತ್ಯಾಗ ಮಾಡಿದ್ದರು. ಹೀಗಿರುವಾಗ ರಾಜ್ಯಸಭೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರಾ? ದೇವೇಗೌಡರು ಟಿಕೆಟ್ ಕೇಳಲು ಹೋಗಿದ್ದರಾ? ಅಥವಾ ಕುಮಾರಣ್ಣ ಟಿಕೆಟ್ ಕೇಳಲು ಹೋಗಿದ್ದರಾ? ಇಲ್ಲ ಎಂದು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ರಾಜ್ಯಸಭಾ ಸ್ಥಾನಕ್ಕಾಗಿ ದೇವೇಗೌಡರು ಅಥವಾ ಕುಮಾರಸ್ವಾಮಿಯವರು ಯಾರನ್ನೂ ಕೇಳಿರಲಿಲ್ಲ. ಬಿಜೆಪಿಯವರೇ ಮೊದಲು ರಾಜ್ಯಸಭಾ ಸ್ಥಾನಕ್ಕೆ ದೇವೇಗೌಡರು ಮತ್ತು ಸದಾನಂದಗೌಡರ ಹೆಸರು ಹೇಳಿದರು. ಬಳಿಕ ಮಂಡ್ಯ ಮೇಡಂ ಸುಮಲತಾ ಅವರ ಹೆಸರು ಹೇಳಿದರು. ಅವರಿಗಾದರೂ ಟಿಕೆಟ್ ಕೊಟ್ಟರಾ ಅದೂ ಇಲ್ಲ ಎಂದಿದ್ದಾರೆ.
ಮಂಡ್ಯ ಮೇಡಂ ಅವ್ರಿಗೂ ಟೋಪಿ ಹಾಕಿದರು. ಪಾಪ ಅವರಿಗಾದರೂ ಟಿಕೆಟ್ ಕೊಟ್ಟಿದ್ದರೆ ಆಗ್ತಿತ್ತು. ಅವರಿಗೆ ಕೊಟ್ಟಿದ್ದರೆ ನಾವೇನು ಬೇಡಾ ಅಂತಿದ್ವಾ? ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಇನ್ನೆರಡು ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಿರಲಿ. ಮುಂದೆ 2028ಕ್ಕೆ ನೋಡೋಣ. ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದರು ಏನಾಯ್ತು? 2004ರಲ್ಲಿ ಏನಾಯ್ತು ಅದನ್ನೂ ನೋಡಿದ್ದೇನೆ. 2014, 2018 ಎಲ್ಲವನ್ನೂ ನೋಡಿದ್ದೇನೆ ನಾನು. ನಾನೂ 30 ವರ್ಷ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.