ಬೆಂಗಳೂರು: ವಿಧಾನ ಪರಿಷತ್ ಮತದಾನ ಮುಗಿದಿದೆ. ನಾವು ಯಾವ ತಂತ್ರಗಾರಿಕೆ ಮಾಡಿಲ್ಲ. ತಂತ್ರಗಾರಿಕೆ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಮತದಾನ ಮುಗಿದಿದೆ. ನಾವು ಯಾವ ತಂತ್ರಗಾರಿಕೆ ಮಾಡಿಲ್ಲ. ಎಲ್ಲರೂ, ಬುದ್ಧಿವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ. ಸ್ವಇಚ್ಛೆಯಿಂದ ಶಾಸಕರು ಮತ ಹಾಕಿದ್ದಾರೆ ಎಂದರು.
ಶಾಸಕರ ಜೊತೆ ಎರಡು ದಿನ ರೆಸಾರ್ಟ್ನಲ್ಲಿ ಕೂತಿದ್ದೆ. ಯಾವ ತಂತ್ರಗಾರಿಕೆ ಮಾಡಿಲ್ಲ. ಅಡ್ಡ ಮತದಾನದ ಬಗ್ಗೆ ಗೊತ್ತಿಲ್ಲ. ಅಡ್ಡ ಮತದಾನ ಆಗುವ ಅಗತ್ಯ ಇಲ್ಲ. ನಮ್ಮ ಮತ ನಮಗೆ ಹಾಕಿ ಅಂತ ಕೇಳಿದ್ದೇವೆ ಅಷ್ಟೇ. ನಮ್ಮ ಶಾಸಕರಿಗೆ ತರಬೇತಿ ನೀಡಲು ರೆಸಾರ್ಟ್ಗೆ ಹೋಗಿದ್ದೆವು. ಪ್ರಾಶಸ್ತ್ಯದ ಮತಗಳನ್ನು ಹುಷಾರಾಗಿ ಹಾಕಬೇಕಾಗಿದೆ. ಆ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ ಎಂದರು.
ನನಗೆ 224 ಜನ ಆತ್ಮೀಯರಾಗಿದ್ದಾರೆ. ಎಲ್ಲರೂ ನನ್ನ ಬ್ರದರ್ಸ್. ನಾನು ಸಿಎಂ ಆಗಿರುವುದು 224 ಶಾಸಕರಿಗೆ. ಅಡ್ಡಮತದಾನ ಬಗ್ಗೆ ನನಗೆ ಗೊತ್ತಿಲ್ಲ. ಕನ್ನಡಿ ಹಾಕಿ ನೋಡಲು ಆಗಲ್ಲ. ಗುಪ್ತ ಮತದಾನ ಇದು ಎಂದು ಹೇಳಿದರು.
ಇದೇ ವೇಳೆ ಮೇಕೆದಾಟು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೇಕೆದಾಟು ಹಾರ್ಟ್ ಆಫ್ ಡಿ.ಕೆ. ಶಿವಕುಮಾರ್ ಅಲ್ಲ. ಮೇಕೆದಾಟು ಹಾರ್ಟ್ ಆಫ್ ದಕ್ಷಿಣ ಕರ್ನಾಟಕವಾಗಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ ಆಗುತ್ತದೆ. ಇದರಿಂದ ತಮಿಳುನಾಡು ರೈತರಿಗೆ ರಕ್ಷಣೆ ಸಿಗುತ್ತದೆ ಎಂದರು.
ಮೇಕೆದಾಟು ಯೋಜನೆಯ ಒಂದು ಹನಿ ನೀರನ್ನೂ, ನೀರಾವರಿಗೆ ಬಳಸುವುದಿಲ್ಲ. ಅದನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸುತ್ತೇವೆ. ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯ ಇದೆ. ತಮಿಳುನಾಡಿಗೆ ಒಂದು ಅಜೆಂಡಾ ಇದೆ. ಅದರಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ. ಈ ವಿಚಾರ ಕೋರ್ಟ್ನಲ್ಲಿದೆ. 400 ಟಿಎಂಸಿ ಕಾವೇರಿ ನೀರು ಸಮುದ್ರಕ್ಕೆ ಹೋಗಿದೆ. ಅವರು ಅನೇಕ ಅಣೆಕಟ್ಟು ಕಟ್ಟುತ್ತಿದ್ದಾರೆ. ಅದಕ್ಕೆ ನಮ್ಮ ತಕರಾರು ಏನೂ ಇಲ್ಲ. ಅದು ಅವರ ಭೂಮಿ ಕಟ್ಟಲಿ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ನಮ್ಮ ಕರ್ತವ್ಯವಾಗಿದೆ. ಇಂಧನ ಕ್ಷೇತ್ರಕ್ಕೆ ಈ ಯೋಜನೆಯಿಂದ ರಾಜ್ಯಕ್ಕೆ ನೆರವಾಗಲಿದೆ. ಇದು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸುವ ಯೋಜನೆಯಾಗಿದೆ. ತಮಿಳುನಾಡಿನವರ ಬಳಿ ಮಾತನಾಡಲು ಸಿದ್ಧ. ನಮಗೆ ಯಾವ ತಕರಾರು ಇಲ್ಲ. ಅನೇಕರು ತಮಿಳುನಾಡಿನಿಂದ ಇಲ್ಲಿಗೆ ಬಂದು, ಕನ್ನಡಿಗರು ಅಲ್ಲಿಗೆ ಹೋಗಿ ವೃತ್ತಿ ಮಾಡುತ್ತಾರೆ. ಕಷ್ಟ ಕಾಲದಲ್ಲಿ ನಾವು ಸುಮಾರು 171 ಟಿಎಂಸಿ ನೀರು ಅವರಿಗೆ ಕೊಡುತ್ತೇವೆ. ಕರ್ನಾಟಕದವರು ಬದುಕಬೇಕು, ತಮಿಳುನಾಡಿನವರೂ ಬದುಕಬೇಕು ಎಂದರು.
ತಮಿಳುನಾಡಿನ ಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕಾರ ಮಾಡಿದೆ. ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲಾ ಸಂಸದರು ರಾಜ್ಯದ ಹಿತಾಸಕ್ತಿ ಕಾಪಾಡುತ್ತಾರೆ. 170 ಟಿಎಂಸಿ ಬಿಡಬೇಕು ಅಂದಾಗ ನಾವು ಒಪ್ಪಿಲ್ಲವಾ?. ಖಂಡಿತವಾಗಿ ಅವರಿಗೆ ಮನವಿ ಮಾಡುತ್ತೇವೆ. ರಾಜಕಾರಣ ಏನಿಲ್ಲ. ಇಬ್ಬರಿಗೂ ಒಳ್ಳೆಯದಾಗುವ ಯೋಜನೆ. ತಾಳ್ಮೆಯಿಂದ ಇರಬೇಕು. ಜನರ ಹಿತ ಕಾಪಾಡಿಕೊಂಡು ಹೋಗೋಣ ಎಂದು ತಿಳಿಸಿದರು.