ಕೊಪ್ಪಳ: ರಾಜ್ಯ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಕೊಪ್ಪಳ ಜಿಲ್ಲೆಗೆ ಆಗಮಿಸಿ, ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ ಅಳವಡಿಸಿದ ಕ್ರಸ್ಟ್ ಗೇಟ್ ಗಳ ಉದ್ಘಾಟನಾ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದರು.
ಮುನಿರಾಬಾದ್ ಗ್ರಾಮದ ಹೈಸ್ಕೂಲ್ ಗ್ರೌಂಡ್ ಆವರಣದಲ್ಲಿ ವೇದಿಕೆ ನಿರ್ಮಾಣದ ಸ್ಥಳ ವೀಕ್ಷಣೆ ನಡೆಸಿ, ಸುಗಮ ಸಂಚಾರಕ್ಕೆ ಸೂಕ್ತವಾದ ರಸ್ತೆ, ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ನಾನಾ ಸಿದ್ಧತೆಗಳ ಬಗ್ಗೆ ಸೂಚನೆ ನೀಡಿದರು. ಟಿಬಿ ಡ್ಯಾಮ್ ಆವರಣದಿಂದ ಮುನಿರಾಬಾದ್ ಶಾಲಾ ಮೈದಾನಕ್ಕೆ ಬಂದು ಹೋಗಲು ಅನುಕೂಲವಾಗುವಂತೆ ಯಾವ ರಸ್ತೆ ಸೂಕ್ತ ಎಂಬುದರ ಬಗ್ಗೆ ನೋಡಿಕೊಳ್ಳಲು ಸಚಿವರು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಮತ್ತು ತಾವು ಕೇಂದ್ರದ ಜಲ ಸಂಪನ್ಮೂಲ ಸಚಿವರಿಗೆ ಭೇಟಿ ಮಾಡಿ ಮಹಾದಾಯಿ, ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ನಾನಾ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದೇವೆ. ಕಳೆದ ವರ್ಷ ತುಂಗಭದ್ರಾ ಡ್ಯಾಮನ ಗೇಟ್ ಕೊಚ್ಚಿ ಹೋದಾಗ 19ನೇ ಗೇಟ್ ಸೇರಿದಂತೆ ಬೇರೆಲ್ಲ ಗೇಟ್ ಗಳನ್ನು ಬದಲಾಯಿಸಲು ನಿರ್ಣಯಿಸಿ ಆರಂಭಗೊಂಡ ಕಾಮಗಾರಿ ಈಗ ಪೂರ್ಣಗೊಂಡಿದೆ. ಇದಕ್ಕಾಗಿ 51 ಕೋಟಿ ರೂ. ಖರ್ಚಾಗಿದೆ. ಈ ಗೇಟ್ ಗಳು 55 ರಿಂದ 60 ವರ್ಷಗಳವರೆಗೆ ಬಾಳಿಕೆ ಬರುತ್ತವೆ ಎಂದು ತಿಳಿಸಿದರು.
ಹೊಸ ಗೇಟಗಳ ಲೋಕಾರ್ಪಣೆ ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ತೆಲಂಗಾಣ ಮತ್ತು ಆಂಧ್ರ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಆಗಮಿಸಲಿದ್ದಾರೆ. ಈ ವೇಳೆ ಆಂಧ್ರ ಮತ್ತು ತೆಲಂಗಾಣ ಸಿಎಂ ಮತ್ತು ಸಚಿವರೊಂದಿಗೆ ಮಾತುಕತೆಗೆ ಏರ್ಪಾಡು ಮಾಡಿ ಜಲಾಶಯದ ನೀರಿನ ಹಂಚಿಕೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ನಾವು ಬದ್ದರಾಗಿದ್ದು, ಮೂರು ರಾಜ್ಯಗಳ ಸಿಎಂ ಮತ್ತು ಸಚಿವರು ಒಂದೆಡೆ ಸೇರಿ ಚರ್ಚಿಸಿ ನಿರ್ಣಯಿಸಲು ಇದು ಸಕಾಲವಾಗಿದೆ ಎಂದು ತಿಳಿಸಿದರು. ಮೂರು ರಾಜ್ಯಗಳ ಸಿಎಂ ಮತ್ತು ಸಚಿವರ ಈ ಸಭೆಯಲ್ಲಿ ಮಹತ್ವದ ಪ್ರಸ್ತಾವನೆಗಳ ಬಗ್ಗೆ ಚರ್ಚಿಸುತ್ತೇವೆ ಎಂದರು.
ಕರ್ನಾಟಕ, ತೆಲಂಗಾಣ ಮತ್ತು ಆಂದ್ರಪ್ರದೇಶ ಮೂರು ರಾಜ್ಯಗಳಿಗೆ ಸಂಬಂಧಿಸಿದಂತೆ ಅಂತಾರಾಜ್ಯ ನದಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಇದು ಸಕಾಲ. ಈ ಭಾಗ ಸೇರಿದಂತೆ ಯಾವುದೇ ಭಾಗದ ಜನತೆಗೆ ಅನ್ಯಾಯ ಆಗೋಕೆ ಬೀಡುವುದಿಲ್ಲ ಎಂದು ಸಚಿವರು ಹೇಳಿದರು.
ಈ ವೇಳೆ ಸಂಸದರಾದ ರಾಜಶೇಖರ ಹಿಟ್ನಾಳ, ಮುಖಂಡರಾದ ಅಮರೇಶ ಕರಡಿ, ಬಳ್ಳಾರಿ ವಲಯದ ಐಜಿಪಿ ಡಾ.ಪಿ ಎಸ್ ಹರ್ಷ, ಕೊಪ್ಪಳ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹಾಗೂ ಇತರರು ಇದ್ದರು.