ಬೆಂಗಳೂರು: ರಾಜ್ಯಸಭೆಗೆ ಬಹಿರಂಗ, ವಿಧಾನ ಪರಿಷತ್ ಗೆ ಗೌಪ್ಯ ಮತದಾನದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ನಮ್ಮ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಹಾಗೂ ರಾಜ್ಯದ ವಿಧಾನ ಪರಿಷತ್ಗೆ ಸಂಬಂಧಿಸಿದಂತೆ ವಿಧಾನಸಭೆಯಿಂದ ಏಳು ಸ್ಥಾನಗಳಿಗೆ ಚುನಾವಣೆಗಳು ನಡೆದವು. ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ನಡೆದವು. ವಿಧಾನ ಪರಿಷತ್ತಿನ ಚುನಾವಣೆಗೆ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಇದ್ದದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಉದ್ಭವಿಸಿರುವ ಒಂದು ಪ್ರಶ್ನೆಗೆ ನಿಮ್ಮಿಂದ ಉತ್ತರ ಬಯಸಿದ್ದೇನೆ.
ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಮತದಾರರು ವಿಧಾನಸಭಾ ಸದಸ್ಯರೇ ಆಗಿದ್ದರು. ರಾಜ್ಯಸಭೆಗೆ ನಡೆದ ಚುನಾವಣೆಗಳಲ್ಲಿ ವಿಧಾನಸಭೆಯ ಸದಸ್ಯರು ಮತ ಚಲಾಯಿಸುವಾಗ, ತಾವು ಗುರುತು ಮಾಡಿದ ಮತ ಚೀಟಿಯನ್ನು ತೋರಿಸಿ ಹಾಕಬೇಕಿತ್ತು. ಆದರೆ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಗಳಲ್ಲಿ ಇದೇ ವಿಧಾನಸಭಾ ಸದಸ್ಯರಿಗೆ ಗೌಪ್ಯ ಮತದಾನದ ಸೌಲಭ್ಯ ದೊರೆತಿತ್ತು.
ಒಂದೊಮ್ಮೆ ರಾಜ್ಯಸಭೆಯ ಚುನಾವಣೆಗಳು ಅವಿರೋಧವಾಗಿ ಆಗಿರದಿದ್ದರೆ ರಾಜ್ಯಸಭೆಯ ಮತ್ತು ವಿಧಾನ ಪರಿಷತ್ತಿನ ಚುನಾವಣೆಗಳು ಒಂದೇ ದಿನ ನಡೆಯುತ್ತಿದ್ದವು. ರಾಜ್ಯಸಭೆಯ ಚುನಾವಣೆಯಲ್ಲಿ ಮತಪತ್ರವನ್ನು ವಿಧಾನಸಭಾ ಸದಸ್ಯರು ಅಲ್ಲಿ ಕುಳಿತಿದ್ದ ತಮ್ಮ ಏಜೆಂಟರಿಗೆ ತೋರಿಸಿ ಹಾಕಬೇಕಿತ್ತು. ಆದರೆ ಅದೇ ವಿಧಾನಸಭಾ ಸದಸ್ಯರು ವಿಧಾನ ಪರಿಷತ್ತಿಗೆ ಮತ ಚಲಾಯಿಸುವಾಗ ಗೌಪ್ಯತೆ ಕಾಪಾಡಿಕೊಳ್ಳಬೇಕಿತ್ತು.
ಈ ಎರಡೂ ಚುನಾವಣೆಗಳಲ್ಲಿ ವಿಧಾನಸಭಾ ಸದಸ್ಯರು ಮತದಾರರಾಗಿ ವರ್ತಿಸಬೇಕಾದ ರೀತಿಯಲ್ಲಿ ಈ ದ್ವಂದ್ವ ನೀತಿ ಏಕೆ? ಈ ರೀತಿಯ ನಿಯಮಾವಳಿಗಳ ಹಿಂದೆ ಇರುವ ಉದ್ದೇಶವೇನು? ದಯವಿಟ್ಟು ಈ ಗೊಂದಲಕ್ಕೆ ಸ್ಪಷ್ಟಿಕರಣ ನೀಡಬೇಕೆಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.