ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಅನರ್ಹ ಹಾಗೂ ಮರಣ ಹೊಂದಿದ ಫಲಾನುಭವಿಗಳ ಖಾತೆಗೆ ಧನಸಹಾಯ ಪಾವತಿಯಾಗುತ್ತಿದೆ ಎಂಬ ಮಾಧ್ಯಮಗಳ ವರದಿಗಳು ಹಾಗೂ ಮಹಾಲೇಖಪಾಲರ ಲೆಕ್ಕ ತಪಾಸಣೆ ವರದಿಯ ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಸ್ಪಷ್ಟೀಕರಣ ನೀಡಿದೆ.
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಸಂಪೂರ್ಣವಾಗಿ ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಅರ್ಹ ಫಲಾನುಭವಿಗಳಿಗೆ ತೊಂದರೆಯಿಲ್ಲದೆ ಧನಸಹಾಯ ತಲುಪುತ್ತಿದೆ.
ಅನರ್ಹ ಹಾಗೂ ಮೃತ ಫಲಾನುಭವಿಗಳ ನಿಯಂತ್ರಣ ಪ್ರಕ್ರಿಯೆ:
ಆದಾಯ ತೆರಿಗೆ ಪಾವತಿದಾರರು ಮತ್ತು ಜಿ.ಎಸ್.ಟಿ ರಿಟರ್ನ್ಸ್ ಸಲ್ಲಿಸುವ ಒಟ್ಟು 1,94,560 ಮಹಿಳೆಯರನ್ನು ‘ಕುಟುಂಬ’ (Kutumba) ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿಯ ಆಧಾರದ ಮೇಲೆ ಗುರುತಿಸಿ, ಪ್ರತಿ ಮಾಹೆ ಧನಸಹಾಯ ಪಾವತಿಯಿಂದ ಹೊರತುಪಡಿಸಲಾಗುತ್ತಿದೆ.
ಮೃತ ಫಲಾನುಭವಿಗಳ ನಿರ್ವಹಣೆ:
ಈ ಯೋಜನೆಯಡಿ ನೋಂದಾಯಿತರಾಗಿದ್ದ ಒಟ್ಟು 2,88,376 ಮಹಿಳೆಯರು ಮರಣ ಹೊಂದಿದ್ದಾರೆ. ಇ-ಜನ್ಮ (e-janma) / ಕುಟುಂಬ ತಂತ್ರಾಂಶದ ಮಾಹಿತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಮೂಲಕ ಮೃತ ಫಲಾನುಭವಿಗಳ ಮಾಹಿತಿಯನ್ನು ಸಕಾಲದಲ್ಲಿ ಪಡೆದು ಅವರನ್ನು ಯೋಜನೆಯಿಂದ ಕೈಬಿಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಮರಣ ಹೊಂದಿದ ಫಲಾನುಭವಿಗಳ ಪೈಕಿ 1,03,922 ಕುಟುಂಬಗಳು ನಿಯಮಾನುಸಾರ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರನ್ನು ಬದಲಾಯಿಸಿಕೊಂಡು, ಮರು ನೋಂದಣಿ ಮಾಡಿಕೊಂಡು ಧನಸಹಾಯ ಪಡೆಯುತ್ತಿದ್ದಾರೆ.
ಮರಣದ ಮಾಹಿತಿ ಸಕಾಲದಲ್ಲಿ ಲಭ್ಯವಾಗದ ಕಾರಣ 1,08,755 ಮೃತ ಫಲಾನುಭವಿಗಳ ಖಾತೆಗೆ ಪಾವತಿಯಾಗಿದ್ದ ರೂ. 115 ಕೋಟಿ ಧನಸಹಾಯ ಮೊತ್ತದಲ್ಲಿ, ಈಗಾಗಲೇ ವಿವಿಧ ಬ್ಯಾಂಕುಗಳೊಂದಿಗೆ (SLBC) ಸಭೆ ನಡೆಸಿ ರೂ. 15.24 ಕೋಟಿಗಳನ್ನು ಸರ್ಕಾರದ ಖಾತೆಗೆ ಮರು ಭರಣ ಮಾಡಿಕೊಳ್ಳಲಾಗಿದ್ದು, ಬಾಕಿ ಮೊತ್ತದ ವಸೂಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಮಹಾಲೇಖಪಾಲರ (CAG) ಆಕ್ಷೇಪಣೆಗಳಿಗೆ ತಾಂತ್ರಿಕ ವಿವರಣೆ:
ಒಂದೇ ಬ್ಯಾಂಕ್ ಖಾತೆಗೆ ಬಹು ಪಾವತಿ (Multiple Beneficiaries):
ಗೃಹಲಕ್ಷ್ಮಿ ಯೋಜನೆಯು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ABPS) ಮೂಲಕ ಅನುಷ್ಠಾನಗೊಳ್ಳುತ್ತಿದೆ. ಇಲಾಖೆಯು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ ಪರಿಶೀಲಿಸಿದಾಗ, ಜಂಟಿ (Joint) ಖಾತೆಗಳನ್ನು ಹೊಂದಿರುವ ಫಲಾನುಭವಿಗಳ (ಉದಾ: ಅತ್ತೆ-ಸೊಸೆ, ತಾಯಿ-ಮಗಳು) ಪ್ರಕರಣಗಳಲ್ಲಿ ಮಾತ್ರ ಒಂದೇ ಖಾತೆಗೆ ಹಣ ಜಮೆಯಾಗಿರುವುದು ಕಂಡುಬಂದಿದೆ. ಇವರು ಬೇರೆ ಬೇರೆ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳಾಗಿದ್ದಾರೆ. ಇದಲ್ಲದೆ ಬ್ಯಾಂಕುಗಳ ತಾಂತ್ರಿಕ ದೋಷದಿಂದಲೂ (Narration Error) ತಪ್ಪಾದ ಖಾತೆ ವಿವರಗಳು ಹಂಚಿಕೆಯಾಗಿರಬಹುದು.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವ ಫಲಾನುಭವಿಗಳು:
ಫಲಾನುಭವಿಗಳು ತಮ್ಮ ಇಚ್ಛೆಯಂತೆ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಿಕೊಳ್ಳಲು ಸಂಪೂರ್ಣ ಅವಕಾಶವಿರುವುದರಿಂದ, ಬೇರೆ ಬೇರೆ ತಿಂಗಳುಗಳಲ್ಲಿ ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗಿರುವ ಸಾಧ್ಯತೆಯಿರುತ್ತದೆ. ಆದರೆ, ಯಾವುದೇ ಒಬ್ಬ ಫಲಾನುಭವಿಗೆ ಒಂದೇ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳಿಗೆ ಹಣ ಜಮೆಯಾಗಲು ಸಾಧ್ಯವಿಲ್ಲ.
ಬ್ಯಾಂಕ್ ಖಾತೆ ವಿವರಗಳಿಲ್ಲದ ಪಾವತಿ:
ಕೆಲವೊಮ್ಮೆ ಬ್ಯಾಂಕುಗಳ ತಾಂತ್ರಿಕ ಸಮಸ್ಯೆಯಿಂದ (Narration Error) ಖಾತೆ ವಿವರಗಳಿಲ್ಲದ ಪ್ರತಿಕ್ರಿಯೆ ಕಡತ ಸೃಷ್ಟಿಯಾಗುತ್ತದೆ. ಇಲಾಖೆಯು ಇದನ್ನು ಪರಿಶೀಲಿಸಿದಾಗ, ಅಂತಹ ಖಾತೆಗಳಿಗೂ ಧನಸಹಾಯ ಜಮೆಯಾಗಿದ್ದು, ಮುಂದಿನ ತಿಂಗಳುಗಳಲ್ಲಿ ಬ್ಯಾಂಕುಗಳು ಸಂಪೂರ್ಣ ವಿವರಗಳನ್ನು ಒದಗಿಸಿರುವುದು ದೃಢಪಟ್ಟಿದೆ.
ಪ್ರಸ್ತುತ ಸ್ಥಿತಿ:
ರಾಜ್ಯದಲ್ಲಿ ಏಪ್ರಿಲ್-2026ರ ಅಂತ್ಯಕ್ಕೆ ಒಟ್ಟು 1,30,35,318 ಫಲಾನುಭವಿಗಳು (ಇತರೆ: 95,66,679, ಪರಿಶಿಷ್ಟ ಜಾತಿ: 24,95,604 ಮತ್ತು ಪರಿಶಿಷ್ಟ ಪಂಗಡ: 9,73,035) ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದು, ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ನಗದು ವರ್ಗಾವಣೆ (DBT) ಮೂಲಕ ಕುಟುಂಬದ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರೂ. 2,000/- ತಲುಪುತ್ತಿದೆ. ಸಾರ್ವಜನಿಕರು ಹಾಗೂ ಮಾಧ್ಯಮಗಳು ಯಾವುದೇ ತಪ್ಪು ಕಲ್ಪನೆಗಳಿಗೆ ಒಳಗಾಗಬಾರದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.