ಜೀವನದ ಅತ್ಯಂತ ಮಹತ್ವದ ಕ್ಷಣದಲ್ಲಿ ಯುವತಿಯೊಬ್ಬಳು ತೆಗೆದುಕೊಂಡ ಧೈರ್ಯದ ನಿರ್ಧಾರ ಈಗ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಮದುವೆ ದಿನವೇ ಮದ್ಯದ ಅಮಲಿನಲ್ಲಿ ತೂಗಾಡುತ್ತಾ ಮಂಟಪಕ್ಕೆ ಬಂದ ವರನನ್ನು ಕಂಡ ವಧು ಎಲ್ಲರ ಎದುರೇ ಕಪಾಳಕ್ಕೆ ಬಾರಿಸಿ, ಮದುವೆಗೆ ನಿರಾಕರಿಸಿದ್ದಾಳೆ. ಈ ಘಟನೆ ಛತ್ತೀಸ್ಗಢದ ಜಂಜ್ಗೀರ್-ಚಂಪಾ ಜಿಲ್ಲೆಯ ಕೋಸ್ಮಾಂಡಾ ಗ್ರಾಮದಲ್ಲಿ ನಡೆದಿದೆ.
ಜೂನ್ 23ರಂದು ಕೋಸ್ಮಾಂಡಾ ಗ್ರಾಮದ ಮುಸ್ಕಾನ್ ಪ್ರಧಾನ (22) ಹಾಗೂ ಖೋಖ್ರಾ ಗ್ರಾಮದ ಸಂತ್ ರಾಮ್ (24) ಅವರ ವಿವಾಹ ನಿಗದಿಯಾಗಿತ್ತು. ನಿಗದಿತ ಸಮಯಕ್ಕೆ ಮೆರವಣಿಗೆಯೊಂದಿಗೆ ವರ ಮದುವೆ ಮಂಟಪಕ್ಕೆ ಬಂದಿದ್ದ. ಆದರೆ ಆತ ಅತಿಯಾಗಿ ಮದ್ಯ ಸೇವಿಸಿ ನಿಲ್ಲಲೂ ಆಗದ ಸ್ಥಿತಿಯಲ್ಲಿದ್ದನು. ಇದನ್ನು ಗಮನಿಸಿದ ವಧು ಮುಸ್ಕಾನ್ ಎಲ್ಲರ ಎದುರೇ ವರನಿಗೆ ಕಪಾಳಕ್ಕೆ ಬಾರಿಸಿ, “ಮದ್ಯಪಾನಿಯೊಂದಿಗೆ ನಾನು ಮದುವೆಯಾಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿ ವಿವಾಹವನ್ನು ರದ್ದುಪಡಿಸಿದ್ದಾಳೆ.
ಮುಸ್ಕಾನ್ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ನಿಶ್ಚಿತಾರ್ಥದ ದಿನವೂ ವರ ಮದ್ಯ ಸೇವಿಸಿ ಬಂದಿದ್ದ. ಆಗ ಎಚ್ಚರಿಕೆ ನೀಡಿದಾಗ ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಆತ ಭರವಸೆ ನೀಡಿದ್ದ. ಆದರೆ ಮದುವೆ ದಿನವೇ ಮತ್ತೆ ಕುಡಿದು ಬಂದಿದ್ದರಿಂದ ಮದುವೆ ನಿರಾಕರಿಸುವ ನಿರ್ಧಾರ ಕೈಗೊಂಡಿದ್ದಾಳೆ.
ವಧುವಿನ ನಿರ್ಧಾರದಿಂದ ಮದುವೆ ಸ್ಥಳದಲ್ಲಿ ಎರಡೂ ಕುಟುಂಬಗಳ ನಡುವೆ ವಾಗ್ವಾದ ಉಂಟಾಗಿ, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ವೇಳೆ ಎರಡೂ ಕಡೆಯ ಯುವಕರ ನಡುವೆ ನಡೆದ ಗಲಾಟೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದುವೆ ಸಿದ್ಧತೆಗಾಗಿ ಮಾಡಿದ ವೆಚ್ಚವನ್ನು ಪರಿಗಣಿಸಿ, ವಧು ಕುಟುಂಬಕ್ಕೆ ಸುಮಾರು ₹3 ಲಕ್ಷ ಪರಿಹಾರ ನೀಡಲು ವರನ ಕುಟುಂಬ ಒಪ್ಪಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. 10ನೇ ತರಗತಿವರೆಗೆ ಶಿಕ್ಷಣ ಪಡೆದಿರುವ ಮುಸ್ಕಾನ್ ಇದೀಗ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ನಿರ್ಧರಿಸಿದ್ದಾಳೆ. ಮದ್ಯದ ದುಶ್ಚಟದ ವಿರುದ್ಧ ಧೈರ್ಯದಿಂದ ನಿಂತು ಮಾದರಿಯಾದ ಆಕೆಯನ್ನು ಜಂಜ್ಗೀರ್-ಚಂಪಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಮಾಜಸೇವಕರು ಹಾಗೂ ಮಹಿಳಾ ಪ್ರತಿನಿಧಿಗಳ ಸಮ್ಮುಖದಲ್ಲಿ ಸನ್ಮಾನಿಸಿದ್ದಾರೆ.
ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮದ್ಯ ವ್ಯಸನ ಹಾಗೂ ಜವಾಬ್ದಾರಿಯಿಲ್ಲದ ವರ್ತನೆಗೆ ಮನ್ನಣೆ ನೀಡಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮುಸ್ಕಾನ್ ಅವರ ಧೈರ್ಯದ ನಿರ್ಧಾರ ಅನೇಕ ಯುವತಿಯರಿಗೆ ಪ್ರೇರಣೆಯಾಗಿದೆ.