ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬಂತೆ ಕೊಟ್ಟ ಕೆಲಸ ಮಾಡದ ಅಡ್ಜಸ್ಟ್ ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಡಲಾರದವನು ಮದ್ದಲೆ ತಿಂದ ಎಂಬಂತೆ ವಿಧಾನ ಪರಿಷದ್ ಚುನಾವಣೆಯ ಹೀನಾಯ ಸೋಲಿನಿಂದ ನಗೆಪಾಟಲಾಗಿರುವ ರಾಜ್ಯಾಧ್ಯಕ್ಷರ ತಂಡವು ನಾನು ಕಾಂಗ್ರೆಸ್ ಗೆ ಮತ ಚಲಾಯಿಸಿದ್ದೇನೆ ಎಂಬ ಸುಳ್ಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿದೆ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ತಮಗೆ ನೀಡಿದ ಜವಾಬ್ದಾರಿಯಲ್ಲಿ ವಿಫಲರಾದ ‘ಅಡ್ಜಸ್ಟ್ಮೆಂಟ್’ ಗಿರಾಕಿಗಳು ತಮ್ಮ ತಪ್ಪನ್ನು ಮರೆಮಾಚಲು ನನ್ನ ಹೆಸರು ತಳುಕು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಕೈಲಾಗದವನಿಗೆ ಕತ್ತೆ ಹೊರುವ ಕೆಲಸ ಎಂಬ ಗಾದೆ ಮಾತಂತೆ ಕೊಟ್ಟ ಕೆಲಸವನ್ನು ಮಾಡದೆ ಬೇರೆ ನಾಯಕರ ಮೇಲೆ ತಪ್ಪು ಹೊರೆಸುವ ಕಾಯಕದಲ್ಲಿ ಅಡ್ಜಸ್ಟ್ಮೆಂಟ್ ಗಿರಾಕಿಗಳು ನಿರತರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರ ಮತ ಚಲಾಯಿಸಿರುವುದಿಲ್ಲ. ಭಾರತೀಯ ಜನತಾ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ನಾನು ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುತ್ತೇನೆ. ಕೆಲಸವಿಲ್ಲದ ಕೆಲ ತಿಳಿಗೇಡಿಗಳು ಹಾಗೂ ಅವರ ಪಟಾಲಂ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾದದ್ದು.
ಅದಕ್ಷತೆ, ಸ್ವಜಪಕ್ಷಪಾತ, ರಾಜ್ಯ ಬಿಜೆಪಿ ನಾಯಕರಲ್ಲಿ ಸಮನ್ವಯದ ಕೊರತೆ, ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಬಿಜೆಪಿಗೆ ಸೋಲಾಗಿದೆ. ಮೀರ್ ಸಾದಿಕ್ ಗಳು ಪಕ್ಷದಲ್ಲೇ ಇದ್ದಾರೆ. ಬೇರೆಯವರ ಮೇಲೆ ಬೊಟ್ಟು ತೋರಿಸುತ್ತಿರುವ ನಾಯಕರಿಂದಲೇ ಪಕ್ಷ ಇಂದು ಸೋಲಿನ ಮೇಲೆ ಸೋಲು ಕಾಣುತ್ತಿದೆ. ಬೇರೆಯವರ ಮೇಲೆ ಬೊಟ್ಟು ತೋರಿಸುವ ಮುನ್ನ ಪಕ್ಷವನ್ನು ಸೋಲಿಸಿದ ನಯವಂಚಕರು ಯಾರು ಮತ್ತು ಅವರ ಬೆನ್ನ ಹಿಂದೆ ಇದ್ದವರ್ಯಾರು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.